ಚಿತ್ರದುರ್ಗ: ಕಿತ್ತೂರು ರಾಣಿ ಚೆನ್ನಮ್ಮ ಇಡೀ ಮಾನವ ಸಮಾಜಕ್ಕೆ ಹಾಕಿಕೊಟ್ಟ ದಾರಿಯಲ್ಲಿ ನಾವು ಮತ್ತು ನಮ್ಮ ಮಕ್ಕಳನ್ನು ನಡೆಸೊಣ, ನಮ್ಮ ಮಕ್ಕಳಲ್ಲಿಯೂ ಸ್ವಾಭಿಮಾನದ ಕಿಚ್ಚು, ಹೋರಾಟದ ಮನೋಭಾವ, ಎಲ್ಲರನ್ನೂ ಪ್ರೀತಿಸುವ ಪ್ರೀತಿ ಬೆಳೆಸೋಣ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವರಾಜ್ಯ ಮತ್ತು ಸ್ವಾತಂತ್ರ್ಯ ಇನ್ನೊಬ್ಬರ ಅಡಿಯಾಗಿರಬಾರದು ಎಂದು ನಂಬಿದ್ದ ಚೆನ್ನಮ್ಮ ತನ್ನ ಪ್ರಜೆಗಳ ಹಿತ ಕಾಯುವ ಸಂಕಲ್ಪ ತೊಟ್ಟು ಬದುಕಿದ ಏಕೈಕ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ನಮ್ಮ ಮಕ್ಕಳಿಗೆ ಸ್ವಾಭಿಮಾನದ ಕಿಚ್ಚು, ಹೋರಾಟದ ಛಲ ಬರಬೇಕು. ಕಿತ್ತೂರು ರಾಣಿ ಚೆನ್ನಮ್ಮ ಅವರ ಸಂದೇಶ ಪಾಲನೆ ಮಾಡಬೇಕು. ಮಹನೀಯರನ್ನು ಯಾವುದೇ ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸಮಾಜದ ಮುಖಂಡರಾದ ಮಹಡಿ ಶಿವಮೂರ್ತಿ, ಎನ್.ಬಿ.ವಿಶ್ವನಾಥ್, ಜಿ.ಎನ್.ಮಹೇಶ್, ಮೋಕ್ಷ ರುದ್ರಸ್ವಾಮಿ, ನಿರ್ಮಲ ಬಸವರಾಜ್, ರೀನಾ ವೀರಭದ್ರಪ್ಪ, ಸುಮಾ ರಾಜಶೇಖರ್, ಪರಮೇಶ್ವರ್, ಶಿವಪ್ರಕಾಶ್, ದಯಾನಂದ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಯ್ಯ ಸೇರಿದಂತೆ ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇದ್ದರು. ಗಾನಯೋಗಿ ಸಂಗೀತ ಬಳಗದ ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು.