ಗುಂಡ್ಲುಪೇಟೆ: ತಾಲೂಕಿನ ದೇಶಿಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂತ್ರಿ ಮಂಡಲವನ್ನು ಚುನಾವಣೆ ನಡೆಸುವ ಮೂಲಕ ರಚನೆ ಮಾಡಲಾಯಿತು.
ಅಭ್ಯರ್ಥಿಗಳು ವಿವಿಧ ಚಿಹ್ನೆಗಳನ್ನು ಹೊಂದಿದ್ದು, ತಮ್ಮ ಪರ ಮತ ಚಲಾಯಿಸುವಂತೆ ವಿದ್ಯಾರ್ಥಿಗಳಿಗೆ ವಿನಂತಿಸಿಕೊಂಡಿದ್ದರು. ಗೌಪ್ಯ ಮತದಾನದ ಮೂಲಕ ಶಾಲಾ ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ಆಧಾರ್ ಕಾರ್ಡ್ ತೆಗೆದುಕೊಂಡು ಬಂದು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.
ಈ ಸಂದರ್ಭದಲ್ಲಿ ಚುನಾವಣೆಯ ಪ್ರಕ್ರಿಯೆಗಳಂತೆ ಶಾಲೆಯಲ್ಲಿಯೂ ಕೂಡ ಮಾದರಿ ಚುನಾವಣೆ ನಡೆಸಿ ಮಕ್ಕಳಲ್ಲಿ ಚುನಾವಣೆ ಗೌಪ್ಯತೆ ಮತ್ತು ಮತದಾನದ ಮಹತ್ವವನ್ನು ಪ್ರತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಹಾಗೆಯೇ ಅಭ್ಯರ್ಥಿಗಳಿಗೆ ಎದುರಿಗೆ ಮತಪತ್ರಗಳನ್ನು ಎಣಿಕೆ ಮಾಡಲಾಯಿತು.
ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ಹಾಗೂ ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆಯಾದ ನೂತನ ಸದಸ್ಯರಿಗೆ ಸಹ ಶಿಕ್ಷಕ ನಂದೀಶ್ ಪ್ರತಿಜ್ಞಾವಿಧಿ ಬೋಧಿಸಿದರು. ಚುನಾವಣಾ ಪ್ರಕ್ರಿಯೆಯನ್ನು ಮುಖ್ಯ ಶಿಕ್ಷಕರಾದ ಪುಟ್ಟಬುದ್ದಿ, ನಂದೀಶ್, ನಾಗಮ್ಮ ಪವಿತ್ರ ಯಶಸ್ವಿಯಾಗಿ ನೆರವೇರಿಸಿಕೊಟ್ಟರು.