ಪಿರಿಯಾಪಟ್ಟಣ: ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪಿಸುವಂತೆ ಸಾಹಿತಿ ಹಾಗೂ ಚಿಂತಕಿ ಡಾ.ಶ್ವೇತ ಮಡಪ್ಪಾಡಿ ಕರೆ ನೀಡಿದರು.
ಪಟ್ಟಣದಲ್ಲಿ ನಡೆದ ಧಾನ್ ಫೌಂಡೇಶನ್ ನಿಂದ ಸ್ಥಾಪಿಸಲ್ಪಟ್ಟ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟದ 20 ನೇ ವಾರ್ಷಿಕ ಮಹಿಳಾ ಮಹಾಸಭೆಯಲ್ಲಿ ಅವರು ಮಾತನಾಡಿದರು. ದೇಶಾದ್ಯಂತ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಆಘಾತಕಾರಿ ವಿಷಯವಾಗಿದೆ, ಮಹಿಳಾ ಸಬಲೀಕರಣ ಬಗ್ಗೆ ವೇದಿಕೆಗಳಲ್ಲಿ ಬೃಹತ್ ಭಾಷಣ ಮಾಡುತ್ತಾರೆ ಆದರೆ ಇಂದಿಗೂ ಮಹಿಳೆಯರ ಶೋಷಣೆಯಾಗುತ್ತಿದೆ ನಮ್ಮನಾಳುವ ಸರ್ಕಾರಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದಾಗ ದೇಶದ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ನಮ್ಮೆಲ್ಲರ ಹೆಜ್ಜೆ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಬೇಕು, ಮಧ್ಯಪಾನ ಸೇವನೆಯಿಂದ ಹಲವು ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದು ಮಧ್ಯಪಾನ ನಿಷೇಧದ ವಿರುದ್ಧ ಸಾಮೂಹಿಕ ಪ್ರತಿಭಟನೆ ಅವಶ್ಯವಿದೆ ಎಂದರು.
ಧಾನ್ ಫೌಂಡೇಶನ್ ಪ್ರಾದೇಶಿಕ ವ್ಯವಸ್ಥಾಪಕರಾದ ಶಂಕರ್ ಪ್ರಸಾದ್ ಅವರು ಮಾತನಾಡಿ ಗಾಂಧೀಜಿಯವರ ತತ್ವ ಮತ್ತು ಮೌಲ್ಯ ಆದರ್ಶಗಳನ್ನು ರೂಡಿಸಿಕೊಂಡು ಸಂಘವು ಸಾಗುತ್ತಿದೆ, ಗ್ರಾಮೀಣಾಭಿವೃದ್ಧಿ ಹಾಗು ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣ ಸಂಘದ ಮೂಲ ಗುರಿಯಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿ ಮಹಿಳಾ ಸಬಲೀಕರಣ ಜೊತೆ ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿರುವ ಧಾನ್ ಫೌಂಡೇಶನ್ ವ್ಯವಸ್ಥಾಪಕರಾದ ನಾರಾಯಣ ಹೆಗಡೆ ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದರು.
ಸಹಾಯಕ ಕೃಷಿ ನಿದರ್ಶಕ ಪ್ರಸಾದ್ ಅವರು ಮಾತನಾಡಿ ಮಹಿಳಾ ಸ್ವ ಸಹಾಯ ಸಂಘಗಳ ರಚನೆ ಮೂಲಕ ಕೌಶಲ್ಯಾಧಾರಿತ ತರಬೇತಿ ನೀಡಿ ಆರ್ಥಿಕ ಪ್ರಗತಿಗೆ ಸಹಕರಿಸುತ್ತಿರುವ ಧಾನ್ ಫೌಂಡೇಶನ್ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಧಾನ್ ಫೌಂಡೇಶನ್ ಯೋಜನಾ ಕಾರ್ಯ ನಿರ್ವಹಕಾಧಿಕಾರಿ ನಾರಾಯಣ ಹೆಗಡೆ ಅವರು ಮಾತನಾಡಿ 2003 – 04 ನೇ ಸಾಲಿನಲ್ಲಿ ತಾಲೂಕಿನಲ್ಲಿ ಪ್ರಾರಂಭವಾದ ಒಕ್ಕೂಟ ಪ್ರಸ್ತುತ 23 ಕೋಟಿ ರುಾ ಉಳಿತಾಯ ಮಾಡಿದೆ, ಸದಸ್ಯರಿಗೆ ಜೀವವಿಮೆ, ಆರೋಗ್ಯ ವಿಮೆ, ಟೈಲರಿಂಗ್ ಹಾಗು ಕೃಷಿ ಸೇರಿದಂತೆ ನಾಯಕತ್ವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿ ವೇತನ ಗೃಹ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಿಗೆ ಸಾಲ ಸೌಲಭ್ಯ ವಿತರಿಸುವ ಮೂಲಕ ಕುಟುಂಬ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು.

ಈ ವೇಳೆ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಒಕ್ಕೂಟದ ಮಾಹಿತಿ ಕೈಪಿಡಿ ಬಿಡುಗಡೆ, ಹೆಚ್ಚು ಉಳಿತಾಯ ಮಾಡಿದ ಸಂಘ ಹಾಗೂ ಹಿರಿಯ ಸದಸ್ಯರಿಗೆ ಉಡುಗೊರೆ ವಿತರಣೆ ನಡೆಯಿತು, ನಾಯಕತ್ವ, ಶಿಕ್ಷಣ, ಆರೋಗ್ಯ, ಆರ್ಥಿಕ ಸೌಲಭ್ಯ, ಕೌಶಲ್ಯಾಭಿವೃದ್ಧಿ, ಜೀವನೋಪಾಯದ ಬಿಂದಿಗೆಯನ್ನು ಬಾವಿಯಿಂದ ಮೇಲೆತ್ತುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಹಾಗು ಒಕ್ಕೂಟದ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಆರಕ್ಷಕ ಠಾಣೆ ಬಳಿಯಿಂದ ಬಿ.ಎಂ ರಸ್ತೆ ಮುಖಾಂತರ ವೇದಿಕೆವರೆಗೆ ಬೃಹತ್ ಜಾಥ ನಡೆಯಿತು, ಮಹಿಳೆಯರು ಧಾನ್ ಫೌಂಡೇಶನ್ ಸಂಸ್ಥೆಯ ಬಿತ್ತಿ ಪತ್ರಗಳನ್ನು ಹಿಡಿದು ಜೈಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು, ಆರಕ್ಷಕ ಇಲಾಖೆ ವತಿಯಿಂದ ಬಂದೋಬಸ್ತ್ ನೀಡಲಾಗಿತ್ತು.
ಈ ಸಂದರ್ಭ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟ ಅಧ್ಯಕ್ಷೆ ಲತಾ, ಕಳಂಜಿಯ ಚಳುವಳಿ ನಾಯಕಿಯರಾದ ಪ್ರಮೀಳಾ, ಸುಕನ್ಯಾ, ಖಜಾಂಚಿ ವಸಂತಾ, ಒಕ್ಕೂಟ ಪದಾಧಿಕಾರಿಗಳು ಸದಸ್ಯರು ಕಚೇರಿ ಸಿಬ್ಬಂದಿ ಇದ್ದರು.