ಬೆಂಗಳೂರು: ಮಹಿಳೆಯೊಂದಿಗಿನ ರಾಸಲೀಲೆ ವಿಡಿಯೋ ವೈರಲ್ ಆರೋಪದ ಬೆನ್ನಲ್ಲೇ ಡಿಜಿಪಿ ಡಾ. ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿದ್ದು, ಡಿಜಿಪಿ ರಾಮಚಂದ್ರ ರಾವ್ ಅವರನ್ನ ಸಸ್ಪೆಂಡ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಚೇರಿಯಲ್ಲಿ ಮಹಿಳೆಯರ ಜೊತೆ ಅಶ್ಲೀಲ ವರ್ತನೆಯಲ್ಲಿ ತೊಡಗಿದ್ದ ಆಡಿಯೋ ಹಾಗೂ ವಿಡಿಯೋ ಜನವರಿ 19 ರಂದು ವೈರಲ್ ಆಗಿತ್ತು. ಉನ್ನತ ಹುದ್ದೆಯಲ್ಲಿರೋ ಈ ಅಧಿಕಾರಿಯ ಕೇಸ್ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿದ ಹಿನ್ನೆಲೆ ಡಿಜಿಪಿ ರಾಮಚಂದ್ರ ರಾವ್ ಅವರನ್ನ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಇನ್ನೂ ಡಿಜಿಪಿಯಾಗಿ ಕೆ.ರಾಮಚಂದ್ರ ರಾವ್ ಸರ್ಕಾರಿ ನೌಕರರಿಗೆ ಶೋಭೆಯಲ್ಲದ ರೀತಿಯಲ್ಲಿ ವರ್ತಿಸಿದ ಆರೋಪವಿದ್ದು, ಇದು ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದೆ. ರಾಜ್ಯ ಸರ್ಕಾರ ಇದನ್ನ ಪರಿಶೀಲನೆ ನಡೆಸಲಿದೆ ಎಂದು ಆದೇಶದಲ್ಲಿ ಬರೆಯಲಾಗಿದೆ.
ಅಧಿಕಾರಿಯ ವರ್ತನೆ ಅಖಿಲ ಭಾರತ ಸೇವೆಗಳ ನಿಯಮಗಳು, 1968 ರ ನಿಯಮ 3 ರ ಉಲ್ಲಂಘನೆಯಾಗಿದೆ. ಆದ್ದರಿಂದ ವಿಚಾರಣೆಯನ್ನು ಬಾಕಿ ಇರಿಸಿ. ಡಾ.ಕೆ.ರಾಮಚಂದ್ರ ರಾವ್ ಅವರನ್ನ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ. ಅಖಿಲ ಭಾರತ ಸೇವೆಗಳ ನಿಯಮಗಳು. 1969 ರ ನಿಯಮ 3(1)(a) ಅಡಿಯಲ್ಲಿ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಈ ವೇಳೆ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮಚಂದ್ರ ರಾವ್ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ, ಗೃಹ ಸಚಿವರು ಅನಾರೋಗ್ಯದ ಕಾರಣ ಹೇಳಿ ಭೇಟಿಗೆ ಅವಕಾಶ ನೀಡಿಲ್ಲ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಮಚಂದ್ರರಾವ್, ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ವಿಡಿಯೊ ಕೃತಕವಾಗಿ ಸೃಷ್ಟಿಸಲಾಗಿದೆ. ಈ ಬಗ್ಗೆ ತನಿಖೆಯಾಗಬೇಕಿದೆ ಎಂದಿದ್ದಾರೆ.



