ಮಂಗಳೂರು (ದಕ್ಷಿಣ ಕನ್ನಡ) : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆಗಳ ಆರೋಪದ ಕುರಿತು ತನಿಖೆ ಮಾಡಲೆಂದು ನಾವೇ ಎಸ್ಐಟಿ ರಚನೆ ಮಾಡಿದ್ದು. ನಾವು ಅವರ ಪರ, ಇವರ ಪರ ಇಲ್ಲ. ನಾವು ಸತ್ಯದ ಪರ ಇದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಂಗಳೂರಿನಲ್ಲಿ ಟಿಎಂಎ ಪೈ ಕನ್ವೆನ್ಶನಲ್ ಸೆಂಟರ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಇಂದು ಆಗಮಿಸಿದ್ದ ಅವರನ್ನು ಸುದ್ದಿಗಾರರು ಎಸ್ಐಟಿ ತನಿಖೆ ಕುರಿತಂತೆ ಪ್ರಶ್ನಿಸಿದಾಗ ಈ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣವನ್ನು ತನಿಖೆ ಮಾಡಲು ಎಸ್ಐಟಿ ಮಾಡಿದ್ದು ನಾವೇ ಅಲ್ಲವೇ. ಹಿಂದಿನ ಸರಕಾರ ಇತ್ತಲ್ಲ ಅವರು ಯಾಕೆ ಮಾಡಿಲ್ಲ. ವೇದಿಕೆ ಇಳಿದು ಸೌಜನ್ಯ ಮನೆಗೆ ಹೋಗಿದ್ದರಲ್ಲ. ಆಗ ಯಾರ ಪರವಾಗಿ ಹೋಗಿದ್ದು? ಅಲ್ಲಿ ಸೌಜನ್ಯ ಸಂಬಂಧಿಕರು ಯಾರ ಹೆಸರು ಉಲ್ಲೇಖಿಸಿದ್ದು? ಅದೇ ಬಿಜೆಪಿ ನಾಯಕರು ಮಾಧ್ಯಮ ಎದುರು ಬಂದು ಸೌಜನ್ಯ ಹೋರಾಟದಲ್ಲಿ ಮತ್ತೆ ಸುಪ್ರೀಂ ಕೋರ್ಟ್ ಹೋಗಬೇಕಾದರೆ ಅವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಅನ್ನುತ್ತಾರೆ.
ಈ ರೀತಿಯಾಗಿ ವೇದಿಕೆ ಇಳಿದಾಗ ವಿರುದ್ಧ, ಹತ್ತಿದಾಗ ಧರ್ಮಾಧಿಕಾರಿ ಪರ ಏನು ನಾಟಕ ಮಾಡುತ್ತಿದ್ದಾರೆ ಬಿಜೆಪಿಯವರು. ಎರಡೆರಡು ದೋಣಿಯಲ್ಲಿ ಕಾಲಿಟ್ಟು ಹೋಗುವ ಬಿಜೆಪಿಯವರನ್ನು ಬಿಟ್ಟು ನಮ್ಮಲ್ಲಿ ಪ್ರಶ್ನೆ ಕೇಳಿದರೇನು ಪ್ರಯೋಜನ ಎಂದು ಪ್ರಶ್ನಿಸಿದರು.