ಬೆಂಗಳೂರು: ಹಿರಿಯ ಪತ್ರಕರ್ತ ಮತ್ತು ಚಿಂತಕ ದಿನೇಶ್ ಅಮಿನ್ ಮಟ್ಟು ತಮ್ಮ ಮೇಲೆ ಸುಳ್ಳು ಆರೋಪ ಮಾಡಿರುವ ವ್ಯಕ್ತಿ ಜಿ. ಎಂ. ಗಾಡ್ಕರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ತಮ್ಮ ಚಾರಿತ್ರ್ಯ ಹನನ ಮಾಡಲು ನಡೆಯುತ್ತಿರುವ ಈ ಪ್ರಯತ್ನದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆನೆಂದು ದಿನೇಶ್ ಮಟ್ಟು ತಿಳಿಸಿದ್ದಾರೆ.
ಗಾಡ್ಕರ್ ಎಂಬ ಅಪರಿಚಿತ ವ್ಯಕ್ತಿ, ದಿನೇಶ್ ಮಟ್ಟು ವಿರುದ್ಧ ಆರೋಪಿಸಿ ರಾಜ್ಯಪಾಲರಿಗೆ ಸಲ್ಲಿಸಿದ ಪತ್ರವನ್ನು ಆಧಾರವನ್ನಾಗಿ ಮಾಡಿಕೊಂಡು, ಕೆಲ ಪತ್ರಿಕೆಗಳು, ಟಿವಿ ಚಾನೆಲ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಸತ್ಯ ಆಧಾರಿತ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ದಿನೇಶ್ ಅಮಿನ್ ಮಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲನೆಯದಾಗಿ, ನಾನು ತುಮಕೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ನಿವೇಶನ ಪಡೆದಿದ್ದೇನೆ ಎನ್ನುವ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು ಮತ್ತು ನಿರಾಧಾರವಾದುದು. ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಾನು ಯಾವುದೇ ನಿವೇಶನ ಪಡೆದಿಲ್ಲ. ಕೇಂದ್ರ ಸರಕಾರದ ಯೋಜನೆಯಾದ ಐಡಿಎಸ್ ಎಂಟಿ ಯೋಜನೆಯಡಿಯಲ್ಲಿ ನಾನು ನಿವೇಶನ ಪಡೆದಿದ್ದು ಅದಕ್ಕೆ ಸಂಬಂಧಿಸಿದ ಎಲ್ಲ ಷರತ್ತುಗಳನ್ನು ನಾನು ಪಾಲಿಸಿದ್ದೇನೆ. ಅದರಲ್ಲಿ ಸ್ಥಳೀಯವಾಗಿ ಹದಿನೈದು ವರ್ಷಗಳ ಕಾಲ ನಿವಾಸಿಯಾಗಿ ಇರಬೇಕೆಂಬ ಯಾವ ಷರತ್ತು ಕೂಡಾ ಇಲ್ಲ. ಇದಕ್ಕೆ ಸಂಬಂಧಿಸಿದ ಷರತ್ತುಗಳುಳ್ಳ ನಿವೇಶನ ಹಂಚಿಕೆ ಪತ್ರವನ್ನು ಲಗತ್ತಿಸಿದ್ದೇನೆ ಎಂದು ಹೇಳಿದ್ದಾರೆ.
ಎರಡನೆಯದಾಗಿ, ಪತ್ರಕರ್ತನಾಗಿರುವ ನನ್ನ ವಿರುದ್ದ ನನಗಾಗದ ವ್ಯಕ್ತಿಗಳು ಪೊಲೀಸ್ ಠಾಣೆಗಳಲ್ಲಿ ಹಲವಾರು ಬಾರಿ ದೂರು ದಾಖಲಿಸಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ ಅಂತಹ ದೂರುಗಳೆಲ್ಲವೂ ದುರುದ್ದೇಶದಿಂದ ಕೂಡಿದ ಮತ್ತು ಆಧಾರರಹಿತವಾಗಿದ್ದ ಕಾರಣ ಯಾವುದೇ ಪ್ರಕರಣದಲ್ಲಿ ನನ್ನ ಮೇಲಿನ ಆರೋಪಗಳು ಸಾಬೀತಾಗಿಲ್ಲ.
ಮೂರನೆಯದಾಗಿ, ದೂರುದಾರರು ಉಲ್ಲೇಖಿಸಿರುವ ‘ದಿ ಪಾಲಿಸಿ ಫ್ರಂಟ್’ ಸಂಸ್ಥೆಯಲ್ಲಿ ನಾನು ಮಾಲೀಕನೂ ಅಲ್ಲ, ಪಾಲುದಾರನೂ ಅಲ್ಲ. ನನಗೆ ಯಾವುದೇ ಸಂಸ್ಥೆಯನ್ನು ಬೇನಾಮಿಯಾಗಿ ನಡೆಸುವ ಅವಶ್ಯಕತೆಯೂ ಇಲ್ಲ. ಸುಳ್ಳು ಮಾಹಿತಿಗಳನ್ನು ಆಧರಿಸಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ದೂರುದಾರರು ನನ್ನ ಚಾರಿತ್ರ್ಯಹನನದ ಏಕೈಕ ಆದೇಶದಿಂದ ಈ ಆರೋಪ ಮಾಡಿದ್ದಾರೆ.
ಕಳೆದ 40 ವರ್ಷಗಳಿಂದ ನಾನು ಪತ್ರಿಕಾ ವೃತ್ತಿಯಲ್ಲಿದ್ದು ಮತ್ತು ಆ ಕಾರಣದಿಂದಾಗಿ ಸಾರ್ವಜನಿಕ ಜೀವನದಲ್ಲಿರುವ ನಾನು ಸಂವಿಧಾನ ಮತ್ತು ನೆಲದ ಕಾನೂನಿಗೆ ಗೌರವಕೊಟ್ಟುಕೊಂಡು ಬದುಕಿದವನು. ವೈಯಕ್ತಿಕ ದ್ವೇಷಾಸೂಯೆಯಿಂದ ಕೆಲವರು ಆರೋಪಗಳನ್ನು ಮಾಡಿದ್ದರೂ ಅವುಗಳು ಸಾಬೀತಾಗದೆ ಬಿದ್ದುಹೋಗಿರುವುದು ನಾನು ಪಾಲಿಸಿಕೊಂಡು ಬಂದಿರುವ ಪ್ರಾಮಾಣಿಕ ಬದುಕು, ಸತ್ಯ ಮತ್ತು ನ್ಯಾಯ ನಿಷ್ಠೆಗೆ ಸಾಕ್ಷಿಯಾಗಿದೆ.
ನನ್ನ ಚಾರಿತ್ರ್ಯಹನನ ಮಾಡುವ ದುರುದ್ದೇಶದಿಂದ ನನ್ನ ವಿರುದ್ದ ಸುಳ್ಳು ಆರೋಪ ಮಾಡಿರುವ ವ್ಯಕ್ತಿಯ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿದ್ದೇನೆ ಎನ್ನುವುದನ್ನೂ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ವಿನಮ್ರವಾಗಿ ಪತ್ರ ಬರೆದಿದ್ದಾರೆ.