ಚಾಮರಾಜನಗರ: : ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಮಂಗಳವಾರ ರಾತ್ರಿ ಚಾಮರಾಜನಗರದ ಇಂದಿರಾ ಕ್ಯಾಂಟೀನ್, ಆಸ್ಪತ್ರೆ, ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಜಿಲ್ಲಾಧಿಕಾರಿ ಕಚೇರಿಯ ಗೇಟ್ ಬಳಿ ಇರುವ ಇಂದಿರಾ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿ ಅಡುಗೆ ಸಾಮಾಗ್ರಿಗಳು, ದಿನಸಿ ದಾಸ್ತಾನು ವೀಕ್ಷಣೆ ಮಾಡಿದರು.ಶುಚಿತ್ವ,ಆಹಾರ ವಿತರಣೆ,ಮೆನು ಪರಿಶೀಲಿಸಿದರು. ರಾತ್ರಿ ಗ್ರಾಹಕರಿಗೆ ವಿತರಿಸಲು ಸಿದ್ದಪಡಿಸಲಾಗಿದ್ದ ರೈಸ್ ಬಾತ್ ಅನ್ನು ಜಿಲ್ಲಾಧಿಕಾರಿಗಳು ಸೇವಿಸಿ ಗುಣಮಟ್ಟ ಪರಿಶೀಲಿಸಿದರು.
ಪ್ರತಿದಿನ ಟೋಕನ್ ವಿತರಿಸಬೇಕು. ಆ ಪ್ರಕಾರವೇ ಆಹಾರ ನೀಡಬೇಕು. ಆಹಾರದಲ್ಲಿ ಗುಣಮಟ್ಟ, ನಿಗದಿತ ಪ್ರಮಾಣ, ಶುಚಿತ್ವ ಕಾಪಾಡಿ ಕೊಳ್ಳ ಬೇಕು.ಎಲ್ಲಿಯೂ ಲೋಪಗಳಾಗಾದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕ್ಯಾಂಟೀನ್ ಗೆ ಸಿ.ಸಿ.ಕೆಮರಾ ಅಳವಡಿಸಬೇಕು. ಪ್ರತಿ ನಿತ್ಯ ಎಷ್ಟು ಮಂದಿಗೆ ಆಹಾರ ವಿತರಿಸಲಾಗಿದೆ ಎಂಬ ಪೂರ್ಣ ವರದಿ ಲೆಕ್ಕ ಪತ್ರ ಸಲ್ಲಿಸುವಂತೆ ಕ್ಯಾಂಟೀನ್ ನಿರ್ವಾಹಕರಿಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಸೂಚನೆ ನೀಡಿದರು.
ಬಳಿಕ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಇರುವ ಸರ್ಕಾರಿ ತಾಯಿಮಕ್ಕಳ ಆಸ್ಪತ್ರೆ ಹಾಗೂ ತುರ್ತು ನಿಗಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯರ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ಹೇಗೆ ನೀಡಲಾಗುತ್ತಿದೆ? ವೈದ್ಯಕೀಯ ಸೇವೆ ಸರಿಯಾಗಿ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು. ತೀವ್ರತರ ಮಕ್ಕಳ ನಿಘಾ ಘಟಕ,ಅಪೌಷ್ಟಿಕತೆ ಮಕ್ಕಳ ನಿರ್ವಹಣೆ ವಿಭಾಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಅಪೌಷ್ಟಿಕತೆ ನಿವಾರಣೆಗೆ ಅನುಸರಿಸಲಾಗುತ್ತಿರುವ ವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಈ ಸಂಬಂಧಿಸಿದಂತೆ ಅಗತ್ಯವಾದ ಸೂಚನೆ ನೀಡಿದರು.
ತದ ನಂತರ ಚಾಮರಾಜನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.ಆಹಾರ ಪದಾರ್ಥಗಳ ದಾಸ್ತಾನು ವೀಕ್ಷಿಸಿದರು. ವಿದ್ಯಾರ್ಥಿನಿಯರಿಗೆ ಸಿದ್ದ ಮಾಡಿದ್ದ ಊಟದ ರುಚಿ ನೋಡಿ ಗುಣಮಟ್ಟ ಪರಿಶೀಲಿಸಿದರು.ವಿದ್ಯಾರ್ಥಿನಿಯರ ಅಹವಾಲಗಳನ್ನು ಆಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ,ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್, ಜಿಲ್ಲ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ, ಡಾ.ಮಹೇಶ್, ಡಾ.ಕೃಷ್ಣ ಪ್ರಸಾದ್,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದಶಕರಾದ ಮಲ್ಲಿಕಾರ್ಜುನ ಇತರರು ಇದ್ದರು.
