ಅಂತರಾಷ್ಟ್ರೀಯ ಮಟ್ಟದ ವಾಣಿಜ್ಯ ಮೇಳ 2026ರ ಅಂಗವಾಗಿ ಜಿಲ್ಲೆಗಳಲ್ಲಿ ಪೂರ್ವಭಾವಿಯಾಗಿ ಸಿರಿಧಾನ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಒಂದಾದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ.
ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಬಹುದು (ವಿದ್ಯಾರ್ಥಿಗಳು ಹಾಗೂ ಕೃಷಿ ಇಲಾಖಾ ಸಿಬ್ಬಂದಿ ಹೊರತುಪಡಿಸಿ). ಸ್ಪರ್ಧೆಯಲ್ಲಿ ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಅಥವಾ ಖಾರ ಖಾದ್ಯಗಳನ್ನು ತಯಾರಿಸಬಹುದು. ಮರೆತುಹೋದ ಖಾದ್ಯಗಳನ್ನು ಸಿರಿಧಾನ್ಯ ಹೊರತುಪಡಿಸಿ ಇತರೆ ದೇಸಿ ತಳಿಗಳಿಂದ ಬರುವ ಆಹಾರ, ಎಣ್ಣೆಕಾಳುಗಳು, ತರಕಾರಿ ಮತ್ತು ಹಣ್ಣುಗಳಿಂದ ತಯಾರಿಸಬಹುದಾಗಿರುತ್ತದೆ. ಸಸ್ಯಾಹಾರ ತಿನಿಸುಗಳಿಗೆ ಮಾತ್ರ ಅವಕಾಶವಿದ್ದು, ಪ್ರತಿ ಸ್ಪರ್ಧಿಯು ಒಂದೇ ತಿನಿಸು (ಅಡುಗೆ) ಸಿರಿಧಾನ್ಯದ ಸಿಹಿ ಅಥವಾ ಸಿರಿಧಾನ್ಯದ ಖಾರಾ ಅಥವಾ ಮರೆತು ಹೋದ ಖಾದ್ಯವನ್ನು ತಯಾರಿಸಬಹುದು.
ಅಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ ಅದಕ್ಕೆ ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಜನವರಿ 3 ರೊಳಗೆ ಕಛೇರಿಯ ಇಮೇಲ್ ರಿಜಚಿgಡಿimಟಿg@gmಚಿiಟ.ಛಿom ಗೆ ಅಥವಾ ವಾಟ್ಸ್ಆ್ಯಪ್ ಮಾಡಬಹುದು ಅಥವಾ ಖುದ್ದಾಗಿ/ ಪೋಸ್ಟ್ ಮೂಲಕ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಲೋಕೋಪಯೋಗಿ ಕಟ್ಟಡ ಸಂಕೀರ್ಣ, ನೆಹರೂ ಮೈದಾನ ರಸ್ತೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು-575001 ವಿಳಾಸಕ್ಕೆ ಕಳುಹಿಸಬಹುದು.
ಅರ್ಜಿಯಲ್ಲಿ ನಮೂದಿಸಿದ ತಿನಿಸನ್ನು ಮನೆಯಲ್ಲಿಯೇ ತಯಾರಿಸಿ ತಂದು ಸ್ಪರ್ಧೆಯ ದಿನ ಜನವರಿ 7 ರಂದು ಬೆಳಗ್ಗೆ 10 ಗಂಟೆಗೆ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಪ್ರದರ್ಶಿಸಲು ಅವಕಾಶವಿರುತ್ತದೆ. ಸಿರಿಧಾನ್ಯ ಸಿಹಿ, ಸಿರಿಧಾನ್ಯ ಖಾರ ಹಾಗೂ ಮರೆತುಹೋದ ಖಾದ್ಯಗಳ ಮೂರು ವಿಭಾಗಗಳಿದ್ದು, ವಿಜೇತರಿಗೆ ಪ್ರಥಮ ಬಹುಮಾನ ರೂ.5000, ದ್ವಿತೀಯ ರೂ.3000 ಹಾಗೂ ತೃತೀಯ ರೂ.2000 ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ನಮೂನೆ ಪಡೆಯಲು ಜಂಟಿ ಕೃಷಿ ನಿರ್ದೇಶಕರ ಕಛೇರಿ (ದೂ.ಸಂ: 0824-2423604 ಅಥವಾ ವಾಟ್ಸ್ಆಪ್ 9972718512/ 8792046592 ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



