ಬೀದರ್: ಬೀದರ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, “ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಯಾಕೆ ಹೀಗಾದರೋ ಗೊತ್ತಿಲ್ಲ. ರಾಜಕೀಯವೇ ಬೇರೆ, ವಿಶ್ವಾಸವೇ ಬೇರೆ. ತುಮಕೂರಿನ ಜನ ಬಹಳ ಮುಗ್ಧರಿದ್ದಾರೆ. ಅವರ ನೆಮ್ಮದಿ ಕಾಪಾಡಿ,” ಎಂದು ಹೇಳಿದರು.
“ನಾನು ಯಾವುದೋ ಊರಿನಿಂದ ಬಂದವನಿಗೆ ವೋಟ್ ಹಾಕಿದ್ದಾರೆ . ಅವರಿಗಾಗಿ ಆ ಯೋಜನೆ ಕೈ ಬಿಡಿ ಎಂದು ವಿನಂತಿ ಮಾಡುತ್ತಿದ್ದೇನೆ. ಇಪ್ಪತ್ತು ವರ್ಷಗಳ ಹಿಂದೆ ರೂಪಿಸಿದ ಯೋಜನೆಯಿಂದ 5 ತಾಲೂಕುಗಳ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ನೀವು ಮಾಡಬಹುದಾದ ಬೇರೆ ಯೋಜನೆಗಳು ಇವೆ – ತಿಪ್ಪಗೊಂಡನಹಳ್ಳಿ, ಮಂಚನಬೇಲೆ… ಅವನ್ನು ಮಾಡಿ. ಆದರೆ ಈಗಿನ ಯೋಜನೆ ಬಿಟ್ಟುಬಿಡಿ. ನೀವೇ ಉಪಮುಖ್ಯಮಂತ್ರಿ, ನೀವೇ ಮಹಾರಾಜ,” ಎಂದು ಹೇಳಿದರು.
ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, “ಸಾಮೂಹಿಕ ಅತ್ಯಾಚಾರ, ಕರಾವಳಿಯಲ್ಲಿ ಹತ್ಯೆಗಳು ನಡೆಯುತ್ತಿವೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಗೃಹ ಸಚಿವರಿಗೂ ಈ ಕುರಿತು ಮನವಿ ಮಾಡುತ್ತೇನೆ,” ಎಂದರು. ಹೆಚ್ಎಎಲ್ ವಿಮಾನ ನಿಲ್ದಾಣ ಆಂಧ್ರಕ್ಕೆ ಶಿಫ್ಟ್ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.