ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ಧ ಮತ್ತೆ ಹೋರಾಟಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು (ಮಂಗಳವಾರ) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆ.31ರಂದು ರಾಜಭವನ ಚಲೋಗೆ ಕರೆ ನೀಡಿ, ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಹೋಗಿ ಯಾವ ಯಾವ ಪೆಂಡಿಂಗ್ ಪ್ರಾಸಿಕ್ಯೂಷನ್ ಇದೆ ಅದನ್ನು ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸುತ್ತೇವೆ. ಈ ಹಿನ್ನಲೆ ಎಲ್ಲ ಶಾಸಕರು, ಸಚಿವರು, ಪರಿಷತ್ ಸದಸ್ಯರು ಭಾಗಿಯಾಗಬೇಕು ಎಂದು ಸೂಚನೆ ನೀಡಿದ್ದಾರೆ.
ಹೆಚ್ಡಿಕೆ ವಿರುದ್ದ ಡಿಕೆಶಿ ಕಿಡಿ
ಇದೇ ವೇಳೆ ‘ನಮ್ಮ ಬಿಗ್ ಬ್ರದರ್ ಕುಮಾರಸ್ವಾಮಿ ಸಾಚಾ ಕೆಲಸ ಮಾಡುವವರು, ಇವರ ವಿರುದ್ಧ 10 ವರ್ಷಗಳ ಹಿಂದೆಯೇ ಕೇಸ್ ದಾಖಲಾಗಿದೆ. 2023ರ ನವೆಂಬರ್ 21ರಂದು ಲೋಕಾಯುಕ್ತ SIT ಅಧಿಕಾರಿಗಳು ಕೂಡ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ನಾವೇನೂ ತಿರುಚಿ ಪರಚಿ ಮಾತಾಡುತ್ತಿಲ್ಲ. 218 ಪುಟಗಳ ತನಿಖಾ ವರದಿಯನ್ನು ರಾಜ್ಯಪಾಲರಿಗೆ SIT ನೀಡಿದೆ. ಬಹಳ ಸತ್ಯಕ್ಕೆ ಹೆಸರಾದವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಾನು ಸಹಿಯೇ ಮಾಡಲಿಲ್ಲ ಎಂದು ಹೇಳಿದರು. ಅವರ ಹೇಳಿಕೆ ನೋಡಿ ನನಗೆ ಆಶ್ಚರ್ಯ ಆಯ್ತು.
‘ಅವರ ಸಹಿ ಅಲ್ಲ ಅಂದಮೇಲೆ ಯಾರೋ ಫೋರ್ಜರಿ ಮಾಡಿದ್ದಾರೆ. ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಯಾಕೆ ದೂರು ಕೊಟ್ಟಿಲ್ಲ?. ಸಹಿ ಫೋರ್ಜರಿ ಆಗಿದ್ರೆ ಒಬ್ಬ ಪಿಸಿಗಾದರೂ ದೂರು ಕೊಡಬೇಕಲ್ವಾ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದರು. ‘ಯಾರೇ ಆಗಿರಲಿ, ಫೋರ್ಜರಿ ಮಾಡಿದವರ ಬಗ್ಗೆ ದೂರು ಕೊಡಬೇಕು. ನಾನು ಜಾಮೀನು ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ನಾನು ಕುಮಾರಸ್ವಾಮಿ ಬ್ರದರ್ ಆಸ್ತಿ ವಿವರವನ್ನೆಲ್ಲ ಕೇಳಿದ್ದೆ ಎಂದು ವಾಗ್ದಾಳಿ ನಡೆಸಿದ್ದಾರೆ.