ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಈಚೆಗೆ ಆಯುಷ್ ಸೇವಾ ಗ್ರಾಮ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಲಾಯಿತು. ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ದೇವೇಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ವನಿತಾ, ವಿದ್ಯಾವತಿ, ವನಿತಮ್ಮ, ಸತ್ಯಮ್ಮ ರೆಹಮಾನ್, ತಿಮ್ಮಾರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಶಿಲ್ಪಾ ಸೇರಿದಂತೆ ಮತ್ತಿತರರು ಉದ್ಘಾಟಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಮಾತನಾಡಿ, ಆಯುಷ್ ಸೇವಾ ಗ್ರಾಮದಲ್ಲಿ ಆಯುಷ್ ವೈದ್ಯಾಧಿಕಾರಿಗಳು ನಿಯಮಿತವಾಗಿ ನಿಮ್ಮ ಮನೆ ಬಾಗಿಲಿಗೆ ಆಗಮಿಸಿ, ತಪಾಸಣೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡುವರು ಹಾಗೂ ಸಮಗ್ರ ಆರೋಗ್ಯಕ್ಕೆ ಅವಶ್ಯಕವಾದ ನೈರ್ಮಲ್ಯ ಜೀವನಶೈಲಿ ಪಥ್ಯ ಹಾಗೂ ಮನೆ ಮದ್ದುಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದ ಪೂರ್ಣ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿಗಳಾದ ಡಾ.ಜಗಧೀಶ್, ಡಾ.ದೇವರಾಜ್ ಸುರಹೊನ್ನೆ, ಡಾ.ಉಮೇಶ್ ರೆಡ್ಡಿ, ಡಾ.ಉದಯಭಾಸ್ಕರ್, ಡಾ.ವಿಜಯಲಕ್ಷ್ಮಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ನಾಝಿಯಾ ಹಾಗೂ ಸಂಚಾರಿ ಆರೋಗ್ಯ ಘಟಕದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು, ಯೋಗ ತರಬೇತುದಾರ ರವಿಅಂಬೇಕರ್, ಆಶಾ ಕಾರ್ಯಕರ್ತೆಯರು, ಅಂಗವಾಡಿ ಕಾರ್ಯಕರ್ತರು ಹಾಜರಿದ್ದರು. ಡಾ.ಶೇಖರಯ್ಯ.ಜಿ.ಮಠದ್ ಅವರು ಸ್ವಾಗತಿಸಿದರು. ಡಾ.ನಾಗರಾಜ ನಾಯ್ಕ್ ಅವರು ನಿರೂಪಿಸಿದರು. ಡಾ.ಟಿ.ಶಿವಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ 150ಕ್ಕೂ ಹೆಚ್ಚು ಜನ ಪ್ರಯೋಜನ ಪಡೆದರು.