ಮೈಸೂರು: ಭಯೋತ್ಪಾದನೆ, ಹಿಂಸೆ, ಅಮಾನವೀಯತೆ ಹೆಸರಿನಲ್ಲಿ ರಕ್ತ ಹರಿಸುವ ಬದಲು ಸಾವು-ಬದುಕಿನ ನಡುವೆ ಹೋರಾಡುವವರಿಗೆ ರಕ್ತ ನೀಡುವುದು ನಿಜವಾದ ಮಾನವೀಯತೆ ಎಂದು ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ 25ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತಧಾನಿಗಳಾದ ಯತಿರಾಜ್, ಸೈಯದ್ ನಜಮುದ್ದೀನ್, ನಾಗೇಂದ್ರ, ಬಾಲಚಂದ್ರ, ಅಕ್ಷಯ್ ಭಾರದ್ವಾಜ್, ಕೌಶಿಕ್ ಬಾರದ್ವಾಜ್, ಭರತ್, ರೇವಣ್ಣ, ಪ್ರೇಮ ರವರಿಗೆ ಸನ್ಮಾನಿಸಿ ಮಾತನಾಡಿದ ಅವರು ದಾನ ಮಾಡುವ ಪರಂಪರೆ ಮೊದಲಿನಿಂದ ಇದ್ದರೂ ರಕ್ತದಾನಕ್ಕೆ ತನ್ನದೇ ಆದ ಮಹತ್ವ ಇದೆ. ನೀರು, ಪೆಟ್ರೋಲ್, ಡೀಸೆಲ್ ಹೀಗೆ ಯಾವ ವಸ್ತುವನ್ನಾದರೂ ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು. ರಕ್ತವನ್ನು ಮಾತ್ರ ಕೊಂಡುಕೊಳ್ಳಲು ಆಗುವುದಿಲ್ಲ. ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಜೀವದಾನಿಗಳಾಗಬಹುದು ಎಂದರು.
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತ ಅತ್ಯವಶ್ಯಕವಾಗಿಬೇಕು. ದ್ವೇಷ, ಜನಾಂಗೀಯ ಘರ್ಷಣೆಯಿಂದ ರಕ್ತಹರಿದರೆ ಯಾವ ಪ್ರಯೋಜನವೂ ಇಲ್ಲ. ದೌರ್ಜನ್ಯದಿಂದ ರಕ್ತ ಹರಿಸುವುದು ಅನಾಗರೀಕತನ. ಜೀವದ ಬೆಲೆಯನ್ನು ಎಲ್ಲರೂ ಅರ್ಥಮಾಡಿಕೊಂಡು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಬೇಕು. ರಕ್ತದಾನದಿಂದ ನಿಶ್ಯಕ್ತರಾಗುತ್ತೇವೆ ಎಂಬುದು ತಪ್ಪು ಕಲ್ಪನೆ ಎಂದರು.
ಡಿ ವೈ ಎಸ್ ಪಿ ಕಿರಣ್ ಕುಮಾರ್ ಮಾತನಾಡಿ ಒಂದು ಯೂನಿಟ್ ರಕ್ತದಿಂದ 3 ಜೀವವನ್ನು ಉಳಿಸಬಹುದು. ಎಲ್ಲರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ. ರಕ್ತವನ್ನು ಇನ್ನಿತರ ವಸ್ತುಗಳಂತೆ ಕೃತಕವಾಗಿ ತಯಾರಿಸಲಾಗದು. ಈ ನಿಟ್ಟಿನಲ್ಲಿ ನಡೆದ ಸಂಶೋಧನೆಗಳೂ ಫಲ ನೀಡಿಲ್ಲ. ನೆಗೆಟಿವ್ ಗ್ರೂಪ್ ರಕ್ತ ಸಿಗುವುದು ತುಂಬಾ ಅಪರೂಪ ವಾಗಿದ್ದು, ಇಂತವರು ದಾನ ಮಾಡುವ ಅತ್ಯಗತ್ಯವಾಗಿದೆ’ ಎಂದು ಹೇಳಿದರು. ಹಾಗೂ ಅತಿ ಹೆಚ್ಚು ರಕ್ತದಾನ ಮಾಡುವ ಪ್ರವೃತ್ತಿ ಹೊಂದಿರುವ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ, ಡಿ ವೈ ಎಸ್ ಪಿ ಕಿರಣ್ ಕುಮಾರ್, ಮೈಸೂರ್ ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾ ನಂದೀಶ್, ಸಿಸಿಬಿ ಇನ್ಸ್ಪೆಕ್ಟರ್ ಶಬೀರ್ ಹುಸೇನ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹಾರಿಯ, ಸಮಾಜ ಸೇವಕರಾದ ರಮೇಶ್, ಸೂರಜ್, ಸದಾಶಿವ್ ಹಾಗೂ ಇನ್ನಿತರರು ಹಾಜರಿದ್ದರು.