ಚಿತ್ರದುರ್ಗ: ಚಿತ್ರದುರ್ಗ ನಗರ ಸಮೀಪದ ಕವಾಡಿಗರಹಟ್ಟಿ-ಆಶ್ರಯ ಬಡಾವಣೆಯ ಆಯ್ದ ಸ್ಥಳಗಳಲ್ಲಿ ಸಮಾಲೋಚನೆ ಗುಂಪು ಸಭೆಗಳನ್ನು ನಡೆಸಿ ಸಾರ್ವಜನಿಕರಿಗೆ ವಿಶ್ವಾಸ ಹಾಗೂ ಭರವಸೆ ಮೂಡಿಸುವ ಕೆಲಸ ನಡೆಸಲಾಯಿತು.
ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಗುರುವಾರ ಜನಜಾಗೃತಿಯ ಒಂದು ಭಾಗವಾಗಿ ಕವಾಡಿಗರಹಟ್ಟಿ-ಆಶ್ರಯ ಬಡಾವಣೆಯ ಮನೆ ಮನೆ ಭೇಟಿ ಅಂತರ್ ವೈಯಕ್ತಿ ಸಮಾಲೋಚನೆ ನಡೆಸಲಾಯಿತು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಜನರು ಸುಳ್ಳು ಸುದ್ದಿಗಳನ್ನು ಆಲಿಸದೆ ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಶುಚಿಯಾದ ಆಹಾರ ಸೇವನೆ ಮಾಡುವತ್ತ ಗಮನಹರಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರ ಉಪಯೋಗವನ್ನು ಪಡೆದುಕೊಳ್ಳಿ. ಅನಾವಶ್ಯಕ ಭಯಪಡುವುದು ಬೇಡ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕೈ ತೊಳೆಯುವ ವಿಧಾನ ಸಾಬೂನಿನ ಉಪಯೋಗ ಶೌಚಾಲಯಗಳ ಬಳಕೆ ಕಾಯಿಸಿ ಆರಿಸಿದ ನೀರಿನ ಉಪಯೋಗ ಜೀರ್ಣವಾಗುವಂತಹ ಆಹಾರ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಮನೆ ಮನೆ ಭೇಟಿಯ ಸಮಯದಲ್ಲಿ ಆಪ್ತ ಸಮಾಲೋಚನೆ ನಡೆಸಲಾಯಿತು. ಆರು ವಿವಿಧ ಸ್ಥಳಗಳಲ್ಲಿ ಗುಂಪು ಸಭೆಗಳನ್ನು ನಡೆಸಲಾಯಿತು. ಕರಪತ್ರಗಳ ನೀಡುವಿಕೆಯ ಮೂಲಕ ಆರೋಗ್ಯ ಮಾಹಿತಿ ಶಿಕ್ಷಣ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಯಶಸ್, ಡಾ.ಸೀಮಾ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ನಂದೀಶ್, ಸಮುದಾಯ ಆರೋಗ್ಯ ಅಧಿಕಾರಿಗಳು ಇದ್ದರು.