Thursday, April 10, 2025
Google search engine

Homeರಾಜ್ಯಸುದ್ದಿಜಾಲಜೂ.೪-೧೪ರವರೆಗೆ ಡೋರ‍್ನಹಳ್ಳಿ ಸಂತ ಅಂತೋಣಿ ವಾರ್ಷಿಕ ಮಹೋತ್ಸವ,ಜಾತ್ರೆ ;ಪೂರ್ವಭಾವಿ ಸಭೆ

ಜೂ.೪-೧೪ರವರೆಗೆ ಡೋರ‍್ನಹಳ್ಳಿ ಸಂತ ಅಂತೋಣಿ ವಾರ್ಷಿಕ ಮಹೋತ್ಸವ,ಜಾತ್ರೆ ;ಪೂರ್ವಭಾವಿ ಸಭೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಜೂ.೪ ರಿಂದ ೧೪ರವರೆಗೆ ತಾಲೂಕಿನ ಡೋರ‍್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ ಮತ್ತು ಜಾತ್ರೆಗೆ ತಾಲೂಕು ಆಡಳಿತದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ತಹಶೀಲ್ದಾರ್ ಸಿ.ಎಸ್.ಪೂರ್ಣಿಮ ತಿಳಿಸಿದರು.

ಡೋರ‍್ನಹಳ್ಳಿಯ ಸಂತ ಅಂತೋಣಿಯವರ ಬಸಿಲಿಕಾದ ಸಮುದಾಯ ಭವನದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಜಾತ್ರೆಯ ಅವಧಿಯಲ್ಲಿ ನಿತ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಮೂಲ ಸವಲತ್ತು ಕಲ್ಪಿಸಬೇಕು ಎಂದರು.

ಜೂ.೧೦ರಿಂದ ೧೪ವರೆಗೆ ಚಾಮರಾಜ ಬಲದಂಡೆ ನಾಲೆಗೆ ನೀರು ಹರಿಸಿ ಅನುಕೂಲ ಮಾಡಬೇಕೆಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ತಹಶೀಲ್ದಾರರು ಇದರ ಜತೆಗೆ ಲಾಳಂದೇವನಹಳ್ಳಿ ಗ್ರಾಮ ಪಂಚಾಯಿತಿ ಅವರು ಕುಡಿಯುವ ನೀರು ಮತ್ತು ಸ್ವಚ್ಚತೆಗೆ ಆದ್ಯತೆ ನೀಡಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತರಬೇಕೆಂದು ಆದೇಶಿಸಿದರು.

ಜಾತ್ರೆಗೆ ಬರುವ ಭಕ್ತಾಧಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ೫೦ ಕೆಎಸ್‌ಆರ್‌ಟಿ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು ಅವಶ್ಯಕತೆಯಿದ್ದರೆ ಮತ್ತಷ್ಟು ಬಸ್ಸುಗಳನ್ನು ಒದಗಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಹಶೀಲ್ದಾರರಿಗೆ ಮಾಹಿತಿ ನೀಡಿದರು.

೧೨ ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದಿಂದಲ್ಲದೆ ಹೊರ ರಾಜ್ಯದಿಂದಲೂ ಲಕ್ಷಾಂತರ ಭಕ್ತರು ಮತ್ತು ಸಾವಿರಾರು ವಾಹನಗಳು ಬರುವುದರಿಂದ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ವಾಹನಗಳ ನಿಲುಗಡೆಗೆ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆ ಈಗಾಗಲೇ ಸಭೆ ನಡೆಸಿ ತೀರ್ಮಾನ ಮಾಡಿದೆ ಎಂದು ಪಿಎಸ್‌ಐ ಧನಂಜಯ್ ಸಭೆಗೆ ತಿಳಿಸಿದರು.

ಪ್ರಮುಖವಾಗಿ ಆರೋಗ್ಯ ಮತ್ತು ಸೆಸ್ಕಾಂ ಇಲಾಖೆಯವರು ಸ್ಥಳದಲ್ಲಿಯೇ ತಮ್ಮ ಸಿಬ್ಬಂದಿಯನ್ನು ಮುಕ್ಕಾಂ ಮಾಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದ ಸಿ.ಎಸ್.ಪೂರ್ಣಿಮ ತಾತ್ಕಾಲಿಕ ಆಸ್ಪತ್ರೆ ಆರಂಭಿಸಿ ಆರೋಗ್ಯ ಸೇವೆ ವಹಿಸಬೇಕು ಎಂದು ಹೇಳಿದರು.

ಇವರ ಜೊತೆಗೆ ತಾಲೂಕು ಮಟ್ಟದ ಇತರ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ವಿಶ್ವ ವಿಖ್ಯಾತ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ ಯಶಸ್ವಿಯಾಗಿ ಜರುಗುವಂತೆ ನೋಡಿಕೊಳ್ಳಬೇಕೆಂದ ಅವರು ನಾನು ಸಹ ಆಗಾಗ ಭೇಟಿ ನೀಡಿ ಸಿದ್ದತೆ ಮತ್ತು ಅನುಕೂಲತೆಗಳ ಪರಿಶೀಲನೆ ನಡೆಸಲಿದ್ದು ಸರ್ವರೂ ಸಹಕಾರ ನೀಡಬೇಕೆಂದು ಕೋರಿದರು.

ಪ್ರಮುಖವಾಗಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮ ವಹಿಸಿ ಇದರೊಂದಿಗೆ ಜಾತ್ರಾ ಮೈದಾನದಲ್ಲಿ ತಿಂಡಿ ಮತ್ತು ಆಟೋಟಗಳ ಯಂತ್ರಗಳನ್ನು ಅಳವಡಿಸುವಾಗ ಖುದ್ದು ಪರಿಶೀಲನೆ ನಡೆಸಿ ಯಾವುದೇ ಅವಘಡಗಳು ಸಂಭವಿಸದoತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಹಶೀಲ್ದಾರರು ಕಟ್ಟೆಚ್ಚರ ನೀಡಿದರು.

ಸಂತ ಅಂತೋಣಿಯವರ ಬಸಿಲಿಕಾದ ಆಡಳಿತಾಧಿಕಾರಿ ವಂದನೀಯ ಗುರು ಪ್ರವೀಣ್‌ಪೇದ್ರು ಮಾತನಾಡಿ ವಿಶ್ವ ವಿಖ್ಯಾತ ಪವಾಡ ಪುರುಷ ಡೋರ‍್ನಹಳ್ಳಿಯ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವಕ್ಕೆ ತಾಲೂಕು ಆಡಳಿತ ಸ್ಥಳೀಯ ಗ್ರಾಮ ಪಂಚಾಯಿತಿಯವರು ಮತ್ತು ಸಾರ್ವಜನಿಕರು ಸರ್ವ ರೀತಿಯ ಸಹಕಾರ ಮತ್ತು ಮಾರ್ಗದರ್ಶನ ನೀಡುವಂತೆ ಕೋರಿದರು. ವಂದನೀಯ ಗುರು ಎನ್.ಟಿ.ಜೋಸೆಫ್ ಮಾತನಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ರಾಜಾರಾಂವೈಲಾಯ, ಅಬಕಾರಿ ನಿರೀಕ್ಷಕ ಶ್ರೀನಿವಾಸಮೂರ್ತಿ, ಶಿರಸ್ತೇದಾರ್ ಅಸ್ಲಾಂಬಾಷ, ಪಿಡಿಒ ಧನಂಜಯ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಕಂದಾಯಾಧಿಕಾರಿ ಸಿದ್ದರಾಜು, ಸಾರಿಗೆ ಇಲಾಖೆಯ ಸುರೇಶ್ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular