ಹೊಸದಿಲ್ಲಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿರಾಡಿ ಘಾಟ್ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನ ವರದಿ (ಡಿಪಿಆರ್) ಸಿದ್ದಪಡಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಿರ್ದೇಶಿಸಿದೆ. ಅದನ್ನು ಆಧರಿಸಿ ಉದ್ದೇಶಿತ ಯೋಜನ ವೆಚ್ಚ, ಲಭ್ಯವಿರುವ ಮೊತ್ತವನ್ನು ಲೆಕ್ಕಾಚಾರ ಹಾಕಿದ ಬಳಿಕ ಯೋಜನೆ ಕೈಗೆತ್ತಿಕೊಳ್ಳುವುದರ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸುರಂಗ ಮಾರ್ಗ ನಿರ್ಮಾಣದ ಬಗ್ಗೆ 2022ರಲ್ಲಿ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಯೋಜನೆಗೆ ಬೃಹತ್ ಮೊತ್ತದ ಅನುದಾನ ಬೇಕು. ಹೀಗಾಗಿ ಅದು ಕಾರ್ಯಸಾಧ್ಯವಲ್ಲ ಎಂದು ಹೇಳಿದ್ದರು. ಪ್ರಸಕ್ತ ವರ್ಷದ ಮಳೆಗಾಲ ಸೇರಿದಂತೆ ಹಲವು ಸಂದರ್ಭಗಳಲ್ಲಿ ಶಿರಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ವ್ಯತ್ಯಯವಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಸುರಂಗ ಮೂಲಕ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಕರ್ನಾಟಕ ಸರಕಾರ ಮತ್ತು ಕರಾವಳಿ ಭಾಗದ ಸಂಸದರು ಒತ್ತಾಯಿಸುತ್ತಿದ್ದರು. ಈ ಬೆಳವಣಿಗೆಯ ನಡುವೆಯೇ ಡಿಪಿಆರ್ ಸಿದ್ಧಪಡಿಸಲು ಆದೇಶಿಸಿದ್ದು ಮಹತ್ವ ಪಡೆದಿದೆ.