ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಾಂಸ್ಕೃತಿಕ ದಸರಾ ಹಬ್ಬವನ್ನು ಟರ್ಮಿನಲ್ ೧ ಮತ್ತು ೨ನಲ್ಲಿ ಅ. ೧೧ರವರೆಗೆ ಅದ್ಧೂರಿಯಿಂದ ಆಚರಿಸಲಾಗುತ್ತಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಮ್ಮ ಹೆಮ್ಮೆಯ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ಕುಚ್ಚುಪುಡಿ, ಡೊಳ್ಳು ಕುಣಿತ, ತಮಟೆ ವಾಧ್ಯ, ನಾಟ್ಯ, ಸಂಗೀತ ಕಚೇರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಟರ್ಮಿನಲ್ ೧ ಮತ್ತು ೨ನಲ್ಲಿ ನಡೆಸಲಾಗುತ್ತಿದೆ. ಈ ಎಲ್ಲಾ ಸಂಭ್ರಮಾಚರಣೆಯ ಭಾಗವಾಗಿ ಬೆಂಗಳೂರು ವಿಮಾನ ನಿಲ್ದಾಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಅ. ೮ರಂದು ಯಕ್ಷಗಾನ, ತಮಟೆವಾಧ್ಯ ಜರುಗಿತು, ಜೊತೆಗೆ, ಜಾನಪದ ಗಾಯನ ಮತ್ತು ನೃತ್ಯ ರೂಪಕ, ವಿದ್ವಾನ್ ರೂಪಶ್ರೀ ಮಧುಸೂದನ್ ಅವರಿಂದ ನೃತ್ಯ ಮತ್ತು ಸಂಗೀತ ಕಲಾ ಪ್ರದರ್ಶನ ಜರುಗಿತು.
ಅ.೯ ರಂದು ಕರ್ನಾಟಕ ಸಂಗೀತ ಹಾಗೂ ನೃತ್ಯ ರೂಪಕ, ಅ.೧೦ ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕುಚುಪುಡಿ ನೃತ್ಯ ಪ್ರದರ್ಶನ, ಅ.೧೧: ಬೊಂಬೆ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಸಾಂಪ್ರದಾಯಕ ಮನರಂಜನೆಯೊಂದಿಗೆ ದಸರಾ ಹಬ್ಬವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಣ್ತುಂಬಿಕೊಳ್ಳಬಹುದು.