ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ಗಜಪಯಣ ಆ.೨೧ರಂದು ನಡೆಯಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಮೃಗಾಲಯದಲ್ಲಿ ಹುಲಿ ಮನೆ ವೀಕ್ಷಣಾ ಗ್ಯಾಲರಿಯನ್ನು ಉದ್ಘಾಟಿಸಿದ ಅವರು, ಈ ಬಾರಿಯೂ ಒಟ್ಟು ೧೪ ಆನೆಗಳನ್ನು ವಿವಿಧ ಶಿಬಿರಗಳಿಂದ ಕರೆತರಲಾಗುತ್ತಿದೆ. ಮೊದಲ ತಂಡದ ೯ ಆನೆಗಳಿಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ೨೧ರಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ’ ಎಂದರು.
ಎರಡನೇ ತಂಡದಲ್ಲಿ ೫ ಆನೆಗಳಿರಲಿದ್ದು, ೪ ಆನೆಗಳನ್ನು ತುರ್ತು ಸನ್ನಿವೇಶಗಳಿಗೆ ಮೀಸಲಿರಿಸಲಾಗಿದೆ. ಆ.೧೨ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಮಾನವ, ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮಾವೇಶ ನಡೆಯಲಿದ್ದು, ಅಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಭೆಯೂ ನಡೆಯಲಿದೆ’ ಎಂದು ತಿಳಿಸಿದರು.