ಹಾಸನ: 1.2 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದು, ಜಾತ್ರಾ ಮಹೋತ್ಸವದ ವ್ಯವಸ್ಥೆಗಳು ಯೋಜನೆಯಂತೆ ಸುಗಮವಾಗಿ ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಶ್ಲಾಘಿಸಿದ್ದಾರೆ.

₹ 1000 ಟಿಕೆಟ್ ದರ್ಶನವು ದಿನವಿಡೀ 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ, ₹ 300 ಟಿಕೆಟ್ ದರ್ಶನವು 10 ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತಿದೆ. ಧರ್ಮ ದರ್ಶನವು 30 ನಿಮಿಷಗಳಿಂದ ಗರಿಷ್ಠ 2 ಗಂಟೆ 30 ನಿಮಿಷಗಳಲ್ಲಿ ಆಗುತ್ತಿದ್ದು, ಎಲ್ಲಾ ವ್ಯವಸ್ಥೆಗಳು ಸುಸೂತ್ರವಾಗಿ ಸಾಗಿವೆ. ಗಣ್ಯರ ದರ್ಶನವೂ ಸಹ ಗೌರವಯುತವಾಗಿ ಸಾಗುತ್ತಿದೆ. ಸಚಿವರು ವೈಯಕ್ತಿಕವಾಗಿ ಪರಿಶೀಲಿಸಿದ್ದು, ಶೌಚಾಲಯಗಳು ಅತ್ಯಂತ ಸ್ವಚ್ಛವಾಗಿದ್ದು, ಕಸವನ್ನು ನಿರಂತರವಾಗಿ ತೆಗೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಕ್ತರು ದರ್ಶನಕ್ಕಾಗಿ 3 ಗಂಟೆ ಅಥವಾ ಅದಕ್ಕೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ಕಾಯಬೇಕಾಗ ಬಹುದು ಎಂದು ಸಚಿವರು ಮುನ್ಸೂಚನೆ ನೀಡಿದ್ದಾರೆ. ಭಕ್ತರ ಭಾರೀ ಜನಸಂದಣಿಯನ್ನು ತಪ್ಪಿಸಲು ಸಚಿವರು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಅಕ್ಟೋಬರ್ 18 ರಿಂದ 22 ರವರೆಗೆ ಅತೀ ಹೆಚ್ಚು ಜನಸಂದಣಿ ಇರುವುದರಿಂದ, ಭಕ್ತರು ಸಾಧ್ಯವಾದರೆ ಅಕ್ಟೋಬರ್ 18ರ ಒಳಗೆಯೇ ಬಂದು ದರ್ಶನ ಪಡೆಯುವ ಮೂಲಕ ಸಹಕರಿಸಬೇಕು ಎಂದು ಕೃಷ್ಣ ಭೈರೇಗೌಡರು ಕೋರಿದ್ದಾರೆ.