ಮಂಗಳೂರು( ದಕ್ಷಿಣ ಕನ್ನಡ): ಈಚರ್ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 6 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟು ಬೈಕಿನಲ್ಲಿದ್ದ ದಂಪತಿ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಾರ ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಸಮೀಪದ ಮುರ ನಿವಾಸಿ ಅಬ್ದುಲ್ ಸಲೀಂ ಎಂಬವರ ಪುತ್ರ ಶಾಝಿನ್ (6) ಎಂದು ಗುರುತಿಸಲಾಗಿದೆ. ಸಲೀಂ ಅವರು ತನ್ನ ಪತ್ನಿ-ಮಕ್ಕಳೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಗಡಿಯಾರ ಎಂಬಲ್ಲಿ ಈಚರ್ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬೈಕಿನಲ್ಲಿದ್ದ ಶಾಝಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಗಾಯಗೊಂಡ ಅಬ್ದುಲ್ ಸಲೀಂ, ಅವರ ಪತ್ನಿ ಹಾಗೂ ಇನ್ನಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಮೃತ ಬಾಲಕನ ಅಂತ್ಯಕ್ರಿಯೆ ಮುರ ಮಸೀದಿಯಲ್ಲಿಂದು ನಡೆದಿದ್ದು, ಇದೇ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ತಂದೆ ಮಗನ ಶವವನ್ನು ನೋಡಲು ಬಂದ ದೃಶ್ಯ ಮನಕಲಕುವಂತಿತ್ತು. ಆ ಕರುಣಾಜನಕ ವೀಡಿಯೋ ವೈರಲ್ ಆಗ್ತಿದೆ.