ಗುಂಡ್ಲುಪೇಟೆ: ತಾಲ್ಲೂಕಿನ ನೆನೆಕಟ್ಟೆ ಗ್ರಾಮದ ಬಳಿ ಸುಮಾರು ೨ ರಿಂದ ೩ ವರ್ಷದ ಹೆಣ್ಣು ಚಿರತೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ನೇನೆಕಟ್ಟೆ ಗ್ರಾಮದ ಹೊರವಲಯದಲ್ಲಿ ಚಿರತೆ ಮೃತಪಟ್ಟಿರುವ ವಿಚಾರ ತಿಳಿದು ಉಪ ಅರಣ್ಯ ವಲಯಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿರತೆ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಚಿರತೆಯು ಮರವೊಂದನ್ನು ಹತ್ತಿದಾಗ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು, ತಂತಿ ಮರ ಕೊಂಬೆಗೆ ಸ್ಪಷ್ಟವಾಗಿ ಅವಘಡ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವೈದ್ಯಾಧಿಕಾರಿಗಳು ಭೇಟಿ ನೀಡಿ, ವಿಷಯವನ್ನು ಸಿಎಫ್ ಅವರ ಗಮನಕ್ಕೆ ತಂದು ಮೃತ ಚಿರತೆ ಮರಣೋತ್ತರ ಪರಿಕ್ಷೆ ನಡೆಸಿ ನಿಯಮಾನುಸಾರ ಕಳೆಬರವನ್ನು ಸುಡಲಾಯಿತು.
ಈ ಸಂದರ್ಭದಲ್ಲಿ ಸಿಎಫ್ ಪ್ರಭಾಕರಣ್, ಎಸಿಎಫ್ ರವೀಂದ್ರ, ಆರ್ ಎಫ್ಓ ಮಲ್ಲೇಶ್, ವೈದ್ಯಾಧಿಕಾರಿ ಡಾ. ಮಿರ್ಜಾ ವಾಸಿಂ, ನಂಜುಂಡರಾಜೇ ಅರಸ್, ವನ್ಯಜೀವಿ ಪರಿಪಾಲಕರು, ಡಿಆರ್ಎಫ್ಓ ಭರತ್, ಗಸ್ತು ವನಪಾಲಕ ಪರಸಪ್ಪ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.