ಹುಣಸೂರು: ನಮ್ಮ ಬದುಕನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬೇಕೆಂದರೆ ನಮ್ಮೊಳಗೊಂದು ಗಟ್ಟಿತನವನ್ನು ರೂಢಿಸಿಕೊಳ್ಳಬೇಕು. ನಮ್ಮ ಗುರಿಯ ಬಗ್ಗೆಯೂ ಸ್ಪಷ್ಟತೆ ಇರಬೇಕು. ಆಯ್ಕೆಗಳ ಕುರಿತಾದ ಸ್ಪಷ್ಟತೆಯೂ ಅತಿ ಮುಖ್ಯ. ನಮ್ಮ ಓದು ನಮ್ಮ ಬದುಕಿನ ದಾರಿಯನ್ನು ಸುಗಮಗೊಳಿಸುತ್ತದೆ, ಮಾತ್ರವಲ್ಲ ನಮ್ಮನ್ನು ಇತರರಿಗಿಂತ ಭಿನ್ನ ಹಾಗೂ ಉತ್ಕೃಷ್ಟ ಸ್ಥಾನದಲ್ಲಿ ನಿಲ್ಲಿಸುತ್ತದೆ. ಹೀಗಾಗಿ ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಲೇಖಕಿ, ಯುವ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ ಅಭಿಪ್ರಾಯ ಪಟ್ಟರು.
ಹುಣಸೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಹಾಗೂ ಮಹಿಳಾ ಸಬಲೀಕರಣ ಘಟಕವು ಆಯೋಜಿಸಿದ್ದ ಐದು ದಿನಗಳ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಶಕ್ತಿವಂತಳು. ಅವಳು ತನ್ನಅಸಾಧ್ಯ ಸಾಧ್ಯತೆಗಳನ್ನು ಕುರಿತು ತಿಳಿಯಬೇಕಾಗಿದೆ. ಪರಿಸ್ಥಿತಿಗಳನ್ನು ಎದುರಿಸಿ ನಡೆಯುವುದೇ ಗಟ್ಟಿತನ. ಆತ್ಮಹತ್ಯೆಯಂಥ ನಿರ್ಧಾರಗಳಿಗೆ ಮುಖಮಾಡುವುದು ಮೂರ್ಖತನ. ಇರುವ ಬದುಕನ್ನು ಅರ್ಥಪೂರ್ಣಗೊಳಿಸುವ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿ ಜೀವನವನ್ನು ಕಡೆಗಣಿಸಬೇಡಿ, ಅದೊಂದು ತಪೋಸ್ಸಾಧನೆ. ನಮ್ಮ ಸುಧೀರ್ಘ ಬದುಕಿಗೆ ಬೇಕಾದ ತಳಹದಿಯನ್ನು ನಾವು ವಿದ್ಯಾರ್ಥಿ ದಿಸೆಯಲ್ಲೇ ಕಟ್ಟಬೇಕಾಗಿದೆ. ಯಾರು ಈ ದಿನಗಳನ್ನು ನಿರ್ಲಕ್ಷಿಸುತ್ತಾರೋ ಮುಂದೆ ಅದಕ್ಕೆ ಪ್ರಾಯಶ್ಚಿತವನ್ನು ಮುಂದೆ ಅನುಭವಿಸಬೇಕಾಗುತ್ತದೆ. ವಿದ್ಯೆಯ ಲೋಕದಲ್ಲಿ ಧನಿಕರಾಗಲು ಸುಲಭೋಪಾಯಗಳಿಲ್ಲ ಎಂದು ಕುವೆಂಪು ಹೇಳಿದ್ದಾರೆ. ವಿದ್ಯೆ ಬೇಕೆಂದರೆ ಅದಕ್ಕಾಗಿ ನಿದ್ದೆ ಕೆಡಬೇಕಾಗುತ್ತದೆ. ಪರಿಶ್ರಮ ಬೇಕಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಡಾ.ಶ್ವೇತಾ ಮಡಪ್ಪಾಡಿ ಅವರು ನಗಾರಿ ಭಾರಿಸುವುದರ ಮೂಲಕ ಉದ್ಘಾಟಿಸಿದರು.
ಅತಿಥಿಗಳನ್ನು ಎತ್ತಿನಗಾಡಿಯ ಮೂಲಕ ವೇದಿಕೆಯವರೆಗೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಮೇದೂರು ಮಹೇಶಾರಾಧ್ಯ, ಪ್ರಾಂಶುಪಾಲರಾದ ಪುಟ್ಟಶೆಟ್ಟಿ, ಡಾ.ಕಾವ್ಯ, ಜ್ಯೋತಿ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.