ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಕಾಡಿನಲ್ಲಿ ಅವಿತಿದ್ದ ಗ್ರಾಮಸ್ಥರನ್ನು ಚಾಮರಾಜನಗರ ಜಿಲ್ಲಾಡಳಿತ ನಾಡಿಗೆ ಕರೆತಂದಿದೆ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಉಳಿದವರು ಹೆದರುವ ಅವಶ್ಯಕತೆ ಇಲ್ಲ. ನಿರ್ಭೀತಿಯಿಂದ ಇರಬಹುದು ಎಂದು ಗ್ರಾಮಸ್ಥರಿಗೆ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್ಪಿ ಧರ್ಮೇಂದ್ರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಯ ಧೈರ್ಯ ತುಂಬಿದಿದ್ದಾರೆ.
ಬಂಧನದ ಭಯದಿಂದ ಗ್ರಾಮಸ್ಥರು ಊರು ಖಾಲಿ ಮಾಡಿದ್ದರು. ಹೀಗಾಗಿ ಗ್ರಾಮದಲ್ಲಿ ವೃದ್ದರು, ಚಿಕ್ಕ ಮಕ್ಕಳು ಜಾನುವಾರುಗಳಿಗೆ ಆರೈಕೆ ಇಲ್ಲದೆ ಪರದಾಡಿದ್ದು, ಮೇವು ನೀರು ಕೊಡುವವರು ಇಲ್ಲದೆ ಎರಡು ಎಮ್ಮೆಗಳು ಸಾವನ್ನಪ್ಪಿದ್ದವು. ಹೀಗಾಗಿ ಇದನ್ನು ಮನಗಂಡು ಕಾಡಿನಲ್ಲಿ ಅವಿತಿದ್ದ ಗ್ರಾಮಸ್ಥರನ್ನು ಪತ್ತೆ ಹಚ್ಚಿ ಊರಿಗೆ ಕರೆತರಲಾಗಿದೆ. ಸೂಕ್ತ ಮೂಲಭೂತ ಸೌಕರ್ಯ ನೀಡುವಂತೆ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕರಿಸಿದ್ದ ಮತದಾರರ ಮನವೊಲಿಸಿ ಮತದಾನಕ್ಕೆ ಕರೆ ತಂದ ವೇಳೆ ಭಾರಿ ಗಲಭೆ ಸೃಷ್ಠಿಯಾಗಿತ್ತು. ಇಂಡಿಗನತ್ತ ಮತಗಟ್ಟೆ ೧೪೬ ರ ಒಳ ನುಗ್ಗಿದ ಪ್ರತಿಭಟನಾಕಾರರು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಮತಗಟ್ಟೆ ಹಾಗೂ ಇವಿಎಂ ಮಷಿನ್ ಧ್ವಂಸ ಗೊಳಿಸಿದ್ದರು.
ಗಲಭೆ ಪ್ರಕರಣದ ಹಿನ್ನಲೆ ೩೩ ಮಂದಿ ಪೊಲೀಸರ ಅಥಿತಿಯಾದ್ರೆ ೨೫೦ ಕ್ಕೂ ಹೆಚ್ಚು ಮಂದಿಯ ಮೇಲೆ ಎಫ್ಐ ಆರ್ ದಾಖಲಾಗಿದೆ. ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಗ್ರಾಮದಲ್ಲಿದ್ದವರು ಪರಾರಿಯಾಗಿದ್ದು ಕೇವಲ ಮಂದಾರೆ ಹಾಡಿಯ ೭೧ ಮಂದಿಯಷ್ಟೇ ಮತದಾನ ಮಾಡಿದ್ದರು. ಮತಗಟ್ಟೆ ೧೪೬ ರಲ್ಲಿ ಒಟ್ಟು ೫೨೮ ಮತದಾರರಿದ್ದು ಈ ಪೈಕಿ ೭೧ ಮಂದಿ ಮಾತ್ರ ಮತದಾನ ಮಾಡಿದ್ದರು.
ಇನ್ನು ಇಂಡಿಗನತ್ತ ಗ್ರಾಮದ ಸುತ್ತಾ ಖಾಕಿ ಸರ್ಪಗಾವಲು ಹಾಕಿದ್ದು ಹೆಜ್ಜೆ ಹೆಜ್ಜೆ ಪೊಲೀಸರು ನಿಯೋಜನೆ ಗೊಂಡಿದ್ದರು. ಹೆಚ್ಚುವರಿ ಎಸ್.ಪಿ ಉದೇಶ್ ಸ್ಥಳದಲ್ಲೇ ಬೀಡು ಬಿಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಗಾ ವಹಿಸಿದ್ದರು.
ಸದ್ಯ ಪರಾರಿಯಾಗಿರುವ ೨೫೦ ಮಂದಿ ಗಲಭೆ ಪ್ರಕರಣದ ಆರೋಪಿಗಾಗಿ ಖಾಕಿ ತಲಾಷ್ ನಡೆಸುತ್ತಿದ್ದು ಒಂದೆಡೆಯಾದರೆ ಮತ್ತೊಂದೆಡೆ ಮತದಾನ ಮಾಡಿದ ಮೆಂದಾರೆ ಹಾಡಿಯ ಜನತೆಗೆ ಭದ್ರತೆಯನ್ನ ನೀಡಲಾಗಿದೆ. ಒಟ್ಟಾರೆ ಇಂಡಿಗನತ್ತ ಮರು ಮತದಾನ ಭಾಗಶಃ ಯಶಸ್ವಿಯಾಗಿದ್ದು ಜಿಲ್ಲಾಡಳಿತ ಯಾವುದೆ ಸಮಸ್ಯೆಯಾಗದಂತೆ ತನ್ನ ಜವಬ್ದಾಯಿಯನ್ನ ಮುಗಿಸಿತ್ತು.