ಚೆನ್ನೈ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಸುಮಾರು ೩೧ ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದ ಎಸ್. ಶಾಂತನ್(೫೫) ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಶಾಂತನ್ ಅಲಿಯಾಸ್ ಟಿ. ಸುತೇಂದ್ರರಾಜ ಮೂಲತಃ ಶ್ರೀಲಂಕಾ ಪ್ರಜೆಯಾಗಿದ್ದು, ೧೯೯೧ರ ಮೇ ೨೧ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ೭ ಅಪರಾಧಿಗಳಲ್ಲಿ ಒಬ್ಬರಾಗಿದ್ದರು.
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಶಾಂತನ್, ೨೦೨೨ರಲ್ಲಿ ಅವಧಿಪೂರ್ವವಾಗಿ ಬಿಡುಗಡೆಗೊಂಡಿದ್ದರು. `ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದ ಶಾಂತನ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಮುಂಜಾನೆ ೭.೩೦ ವೇಳೆ ಅವರು ನಿಧನರಾದರು’ ಎಂದು ರಾಜೀವ್ ಗಾಂಧಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡೀನ್ ಇ.ಥೆರನಿರಾಜನ್ ತಿಳಿಸಿದ್ದಾರೆ. ಶಾಂತನ್ ಪಾರ್ಥಿವ ಶರೀರವನ್ನು ಶ್ರೀಲಂಕಾಗೆ ಕೊಂಡೊಯ್ಯಲಾಗುವುದು ಎಂದು ಶಾಂತನ್ ಪರ ವಕೀಲ ತಿಳಿಸಿದ್ದಾರೆ. ೧೯೯೧ರ ಮೇ ೨೧ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ರಾಜೀವ್ ಅವರು ಚುನಾವಣಾ ಪ್ರಚಾರ ನಡೆಸುವಾಗ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಧನು ಎಂಬಾಕೆ ಬಾಂಬ್ ಸ್ಫೋಟಿಸಿಕೊಂಡು, ರಾಜೀವ್ ಅವರ ಹತ್ಯೆ ಮಾಡಿದ್ದಳು. ಹಂತಕರಾದ ಎ.ಜಿ.ಪೇರರಿವಾಳನ್, ನಳಿನಿ ಶ್ರೀಹರನ್, ಆಕೆಯ ಪತಿ ಮುರುಗನ್, ಶಾಂತನ್, ರಾಬರ್ಟ್ ಪಿಯಸ್, ಜಯಕುಮಾರ್ ಹಾಗೂ ರವಿಚಂದ್ರನ್ ಈ ಹತ್ಯೆಗೆ ಸಂಚು ರೂಪಿಸಿದ್ದರು.
೧೯೯೮ರಲ್ಲಿ ತಮಿಳುನಾಡಿನ ವಿಚಾರಣಾ ನ್ಯಾಯಾಲಯವು ಎಲ್ಲಾ ಹಂತಕರಿಗೆ ಮರಣದಂಡನೆ ಘೋಷಿಸಿತ್ತು. ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ೧೯೯೯ರಲ್ಲಿ ಎತ್ತಿಹಿಡಿದಿತ್ತು. ಮುರುಗನ್, ಶಾಂತನ್ ಮತ್ತು ಎ.ಜಿ.ಪೇರರಿವಾಳನ್ ಅವರು ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯು ಇತ್ಯರ್ಥವಾಗದೇ ದೀರ್ಘಾವಧಿ ಕಳೆದಿದೆ ಎಂಬ ಆಧಾರದಲ್ಲಿ ೨೦೧೪ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿತ್ತು. ನಳಿನಿ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಸ್ವತಃ ಸೋನಿಯಾ ಗಾಂಧಿ ಅವರೇ ತಮಿಳುನಾಡಿನ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ೨೦೨೨ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಮೇರೆಗೆ ಎಲ್ಲಾ ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಗಿತ್ತು.