ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐನಿಂದ ತಮ್ಮ ಬಂಧನ ಮತ್ತು ರಿಮ್ಯಾಂಡ್ ಆದೇಶವನ್ನು ಪ್ರಶ್ನಿಸಿ ಇಂದು (ಸೋಮವಾರ) ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಜುಲೈ 12ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲು ನ್ಯಾಯಾಲಯ ಜೂನ್ 29ರಂದು ಆದೇಶಿಸಿತ್ತು.
ಮೂರು ದಿನಗಳ ಕಸ್ಟಡಿ ವಿಚಾರಣಾ ಅವಧಿ ಮುಗಿದ ಬಳಿಕ ಕೇಜ್ರಿವಾಲ್ ಅವರನ್ನು ವಿಶೇಷ ನ್ಯಾಯಾಧೀಶ ಸುನೇನಾ ಶರ್ಮ ಅವರ ಮುಂದೆ ಹಾಜರುಪಡಿಸಲಾಗಿತ್ತು. ತನಿಖಾ ದೃಷ್ಟಿಯಿಂದ ಅರವಿಂದ ಕೇಜ್ರಿವಾಲ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಬೇಕು ಎಂದು ಸಿಬಿಐ ಅರ್ಜಿಯಲ್ಲಿ ಕೋರಿತ್ತು. ಸಿಬಿಐ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಧೀಶರು ಅವರಿಗೆ ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.