ಮಂಗಳೂರು(ದಕ್ಷಿಣ ಕನ್ನಡ): ಹಿಂದೂ ಕಾರ್ಯಕರ್ತರ ವಿರುದ್ಧ ಗಡಿಪಾರು ನೊಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಹಿಂದೂ ಪರಿಷತ್, ಬಜರಂಗದಳವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಬಜರಂಗದಳ ಮುಖಂಡ ಸುನಿಲ್.ಕೆ.ಆರ್, ದೇಶಕ್ಕಾಗಿ ಬಜರಂಗದಳದ ಕಾರ್ಯಕರ್ತರು ಹೋರಾಡಲು ಯಾವತ್ತೂ ಸಿದ್ಧ. ಭಜರಂಗದಳದ ಕಾರ್ಯಕರ್ತರು ಅತ್ಯಾಚಾರ, ದರೋಡೆ ಮಾಡಿ ರೌಡಿ ಪಟ್ಟ ಕಟ್ಟಿಕೊಂಡವರಲ್ಲ. ಗೋ ಮಾತೆ, ನಮ್ಮ ಅಕ್ಕ-ತಂಗಿಯಂದಿರ ರಕ್ಷಣೆಗಾಗಿ ಕೇಸು ಹಾಕಿಸಿಕೊಂಡವರು. ಈ ಹೋರಾಟಗಳು ನಿರಂತರವಾಗಿ ನಡೆಯಲಿದೆ ಎಂದರು.
ಹಿಂದೂ ಕಾರ್ಯಕರ್ತರನ್ನ ಗಡಿಪಾರು ಮಾಡಿದರೆ ಹಿಂದೂ ಸಂಘಟನೆಗಳನ್ನು ವಿಚಲಿತಗೊಳಿಸಬಹುದು ಎನ್ನುವ ಭ್ರಮೆ ಬೇಡ. ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ ಈ ರೀತಿಯ ಕೃತ್ಯ ಮಾಡಬೇಡಿ. ನಮ್ಮ ಕಾರ್ಯಕರ್ತರನ್ನು ಗಡಿಪಾರು ಮಾಡಿದಲ್ಲಿ ಸಂಘಟನೆಯಿಂದ ದೂರ ಉಳಿಯುತ್ತಾರೆ ಎಂದು ಸರಕಾರ, ಪೊಲೀಸ್ ಇಲಾಖೆ ತಿಳಿದುಕೊಂಡಿದೆ. ಇದು ಯಾವತ್ತೂ ಸಾಧ್ಯವಿಲ್ಲ. ಕಾರ್ಯಕರ್ತರ ಮೇಲಿನ ಗಡಿಪಾರು ನೊಟೀಸ್ ತಕ್ಷಣ ವಾಪಾಸು ಪಡೆಯಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.