ಮಂಗಳೂರು (ದಕ್ಷಿಣ ಕನ್ನಡ): ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸಿಂಗಾಪುರ ಮೂಲದ ಕಂಟೈನರ್ ಹಡಗು (ಎಂವಿ ವಾನ್ ಹೈ 503) ಕೇರಳದ ಬೇಪೋರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲು ದೂರದಲ್ಲಿ ಸಂಚರಿಸುತ್ತಿದ್ದಾಗ ಈ ಹಡಗಿನಲ್ಲಿ ಸ್ಫೋಟ ಸಂಭವಿಸಿ, ಬೆಂಕಿ ಹತ್ತಿಕೊಂಡಿದೆ.
ಈ ಹಡಗಿನಲ್ಲಿದ್ದ 22 ಸಿಬ್ಬಂದಿಯಲ್ಲಿ 18 ಮಂದಿಯನ್ನು ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ಸೂರತ್ ರಕ್ಷಿಸಿದ್ದು, ಆದರೆ ನಾಲ್ವರು ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಗಾಯಗೊಂಡಿರುವ ಐವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ರಕ್ಷಿಸಲ್ಪಟ್ಟ ಮತ್ತು ಗಾಯಗೊಂಡ ಸಿಬ್ಬಂದಿಗೆ ಐಎನ್ಎಸ್ ಸೂರತ್ ಪಣಂಬೂರಿನ ಹೊಸ ಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ)ದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ಹಡಗಿನಲ್ಲಿದ್ದ ಸಿಬ್ಬಂದಿಯ ಪೈಕಿ ಚೀನಾದ 8, ತೈವಾನ್ನ 4 , ಮ್ಯಾನ್ಮಾರ್ನ 4 ಮತ್ತು ಇಂಡೋನೇಶ್ಯದ 2 ಇಬ್ಬರು ಇದ್ದರೆಂದು ಗುರುತಿಸಲಾಗಿದೆ. ಜೂನ್ 7ರಂದು ಕೊಲಂಬೊದಿಂದ ಹೊರಟಿದ್ದ ಈ ಹಡಗು ಜೂನ್ 10ರಂದು ಮುಂಬೈಗೆ ತಲುಪುವ ನಿರೀಕ್ಷೆ ಇತ್ತು. ಹಡಗಿನಲ್ಲಿ ಭಾರೀ ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿದು ಬಂದಿದೆ.