ಮಂಗಳೂರು (ದಕ್ಷಿಣ ಕನ್ನಡ) : ಎಸ್.ಐಟಿ ಕಾರ್ಯಾಚರಣೆ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಆರೋಪ ವಕೀಲ ಮಂಜುನಾಥ ಎನ್ ವಿರುದ್ಧ ಪ್ರಕರಣ ದಾಖಲು ಬೆಳ್ತಂಗಡಿ ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ (44) ಎಂಬವರು ದೂರು ನೀಡಿದ್ದರು.
ಧರ್ಮಸ್ಥಳದ ನಿವಾಸಿ ರಘುರಾಮ ಶೆಟ್ಟಿ (44) ಅವರು ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ, ಮಂಜುನಾಥ ಎನ್ ಎಂಬ ವಕೀಲರೊಬ್ಬರು ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗುವಂತಹ ಭಯ ಮತ್ತು ಗೊಂದಲ ಉಂಟುಮಾಡುವ ಸುದ್ದಿಪತ್ರ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಈ ಪ್ರಕಟಣೆಯಲ್ಲಿ ಅನಧಿಕೃತ, ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಎಸ್ಐಟಿ ಕಾರ್ಯಚರಣೆಯ ಕುರಿತು ತಾರತಮ್ಯಭರಿತ ಹಾಗೂ ದೃಢವಾದ ಮಾಹಿತಿ ಇಲ್ಲದೆ ಜನರಲ್ಲಿ ಭ್ರಾಂತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ, ಸಾರ್ವಜನಿಕರಲ್ಲಿ ಗೊಂದಲ ಮತ್ತು ಭಯ ಸೃಷ್ಟಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ದಾಖಲಿಸಿದ ಪ್ರಕರಣವು ಬೆಳ್ತಂಗಡಿ ಪೊಲೀಸ್ ಠಾಣೆಯ ಅ.ಕ್ರ: 96/2025 ಎಂದು ನೊಂದಾಯಗೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 353(1)(b) ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಧಿಗಳು ಸಾರ್ವಜನಿಕ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಅಡ್ಡಿ ಉಂಟುಮಾಡುವುದು, ಅಥವಾ ಜನತೆ ನಡುವೆ ಗೊಂದಲ ಹುಟ್ಟುಹಾಕುವ ನಿಟ್ಟಿನಲ್ಲಿ ತಪ್ಪು ಮಾಹಿತಿ ನೀಡುವ ಬಗ್ಗೆ ವಿಧಿಗಳನ್ನು ಒಳಗೊಂಡಿವೆ.
ಪ್ರಸ್ತುತ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು, ಮಂಜುನಾಥ ಎನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.