ಭಟ್ಕಳ : ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡಗಳು ತೈಲ ಬೆಲೆಯ ಮೇಲೆ ಭಾರಿ ಹೊಡೆತ ನೀಡಲಿವೆ ಎಂಬ ವದಂತಿ ಭಟ್ಕಳದಲ್ಲಿ ಸಂಚಲನ ಮೂಡಿಸಿದೆ. ಸುಳ್ಳು ಸುದ್ದಿಯನ್ನು ನಂಬಿದ ಜನರು ಆತಂಕಗೊಂಡು ಇದೀಗ ಪೆಟ್ರೋಲ್ ಬಂಕ್ಗಳಿಗೆ ನೂಕುನುಗ್ಗಲು ಮಾಡುತ್ತಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಏಕಾಏಕಿ ಹೆಚ್ಚಾಗಬಹುದು ಅಥವಾ ಪೂರೈಕೆ ಸ್ಥಗಿತಗೊಳ್ಳಬಹುದು ಎಂಬ ತಪ್ಪು ಗ್ರಹಿಕೆಯಿಂದ ಜನರು ಪೆಟ್ರೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಭಟ್ಕಳ ಪಟ್ಟಣದ ಪ್ರಮುಖ ಪೆಟ್ರೋಲ್ ಪಂಪ್ಗಳಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದು, ಕೆಲವೇ ಗಂಟೆಗಳಲ್ಲಿ ಮೂರಕ್ಕೂ ಹೆಚ್ಚು ಬಂಕ್ಗಳಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದೆ. ಕೇವಲ ವಾಹನಗಳಿಗೆ ಮಾತ್ರವಲ್ಲದೆ, ಪ್ಲಾಸ್ಟಿಕ್ ಕ್ಯಾನ್ಗಳಲ್ಲಿಯೂ ಲೀಟರ್ಗಟ್ಟಲೆ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಭಟ್ಕಳದಲ್ಲಿ ಪೆಟ್ರೋಲ್ ಸಿಗದ ಕಾರಣ ಜನರು ಅನಿವಾರ್ಯವಾಗಿ ನೆರೆಯ ಹೊನ್ನಾವರ ಮತ್ತು ಉಡುಪಿ ಜಿಲ್ಲೆಯ ಕುಂದಾಪುರ ಭಾಗದ ಬಂಕ್ಗಳಿಗೆ ತೆರಳಿ ಪೆಟ್ರೋಲ್ ಸಂಗ್ರಹಿಸುತ್ತಿದ್ದಾರೆ. ತೈಲ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಯವಾಗಿಲ್ಲ ಮತ್ತು ಬೆಲೆ ಏರಿಕೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಜನರು ಅನಗತ್ಯವಾಗಿ ಆತಂಕಕ್ಕೊಳಗಾಗಿ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಅತಿಯಾದ ಸಂಗ್ರಹಣೆಯಿಂದಾಗಿ ಕೃತಕ ಅಭಾವ ಸೃಷ್ಟಿಯಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.



