ಮೈಸೂರು : ಒರಿಸ್ಸಾದ ನೌಕಾನೆಲೆ ಮತ್ತು ತರಬೇತಿ ಕೇಂದ್ರ ಐಎನ್ಎಸ್ ಚಿಲ್ಕಾದಲ್ಲಿ ಸೆ.೮ ರಿಂದ ೧೬ ರವರೆಗೆ ನಡೆಯುವ ಅಖಿಲ ಭಾರತ ಯಾಚಿಂಗ್ ರೆಗಟ್ಟಾ-೨೦೨೫ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ನೌಕಾ ಪಡೆಯ ೬ ಜನ ಎನ್ಸಿಸಿ ಕೆಡೆಟ್ಗಳು ಮತ್ತು ಒಬ್ಬ ಬೋಧಕರನ್ನು ಭಾನುವಾರ ಬೆಳಗ್ಗೆ ನಗರದ ರೈಲು ನಿಲ್ದಾಣದಲ್ಲಿ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಶುಭ ಹಾರೈಸಿ, ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಗಜಾನನ ಟಿ.ಭಟ್ ಅವರ ನೇತೃತ್ವದಲ್ಲಿ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಒರಿಸ್ಸಾದ ಐಎನ್ಎಸ್ ಚಿಲ್ಕಾದಲ್ಲಿ
ನಡೆಯುವ ಸ್ಪರ್ಧೆಗೆ ಹೊರಟ ೬ ಜನ ಎನ್ಸಿಸಿ ಕೆಡೆಟ್ಗಳಾದ ವಿಶ್ರುತ್, ಪ್ರೀತಮ್, ಅಮೃತ್, ಪ್ರಾಂಜಲ್ ಪ್ರಕೃತಿ ಮತ್ತು ಅಂಗನಾ ಹಾಗೂ ಬೋಧಕರಾದ ಸಿ.ಎಸ್.ಪ್ರಜಾಪತಿ ಅವರನ್ನು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬೀಳ್ಕೊಟ್ಟರು.
ಈ ಕಾರ್ಯಕ್ರಮವನ್ನು ಒರಿಸ್ಸಾದ ಎನ್ಸಿಸಿ ನೌಕಾಪಡೆ ನಿರ್ದೇಶನಾಲಯ ಆಯೋಜಿಸಿದೆ. ಭಾರತೀಯ ನೌಕಾಪಡೆಯ ಪ್ರಮುಖ ನೌಕಾ ತರಬೇತಿ ಸಂಸ್ಥೆಯಾದ ಒರಿಸ್ಸಾದ ಐಎನ್ಎಸ್ ಚಿಲ್ಕಾದಲ್ಲಿ ನಡೆಯುವ ಈ ಚಾಂಪಿಯನ್ಶಿಪ್ನಲ್ಲಿ ಭಾರತದ ೩೨ ರಾಜ್ಯಗಳ ೧೭ ಎನ್ಸಿಸಿ ನಿರ್ದೇಶನಾಯಗಳಿಂದ ೧೦೦ಕ್ಕೂ ಹೆಚ್ಚು ನೌಕಾ ಕೆಡೆಟ್ಗಳು ಈ ಮೆಗಾ ಈವೆಂಟ್ನಲ್ಲಿ ಭಾಗವಹಿಸಲಿದ್ದಾರೆ. ಮೈಸೂರಿನಿಂದ ಹೊರಟಿರುವ ಇದೇ ತಂಡ ಕಳೆದ ಬಾರಿ ಪ್ರಶಸ್ತಿಯನ್ನು ಪಡೆದಿದ್ದು, ಈ ಬಾರಿಯೂ ಪ್ರಶಸ್ತಿಗಳಿಸುವ ವಿಶ್ವಾಸ ಹೊಂದಿದೆ ಎಂದು ನೌಕಾಪಡೆಯ ನಿವೃತ್ತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಗಜಾನನ ಟಿ.ಭಟ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಗಜಾನನ್ ಟಿ.ಭಟ್, ಸಂಘಟನಾ ಸಂಚಾಲಕರಾದ ತಾಜುದ್ದೀನ್ ಹೈದರಿ, ಅರ್ಜುನ ಪ್ರಶಸ್ತಿ ವಿಜೇತೆ ಮತ್ತು ವೀರನಾರಿ ರಜನಿ ಸುಬ್ಬಯ್ಯ, ಸಹ ಸಂಚಾಲಕರಾದ ಚಂದ್ರಕುಮಾರ್ ಬಿ.ಎಸ್., ತರಬೇತುದಾರರು ಮತ್ತು ಮಾರ್ಗದರ್ಶಕರಾದ ಯಶವಂತ್ ಮತ್ತು ಚಂದನ್ ಜಿ.ಟಿ., ಎನ್ಸಿಸಿ ನೌಕಾಪಡೆಯ ಮುಖ್ಯ ಬೋಧಕ ಮಾಯಾಂಕ್ ಮತ್ತು ಗೋಪಿ ಉಪಸ್ಥಿತರಿದ್ದು, ಒರಿಸ್ಸಾಕ್ಕೆ ಹೊರಟ ಎನ್ಸಿಸಿ ಕೆಡೆಟ್ಗಳಿಗೆ ಶುಭ ಹಾರೈಸಿದರು.
ಇದೇ ವೇಳೆ ರೇರ್ ಅಡ್ಮಿರಲ್ ಮತ್ತು ಮುಖ್ಯ ಪೋಷಕರಾದ ರವಿ ಗಾಯಕ್ವಾಡ್ ಅವರು ಎಲ್ಲಾ ಕೆಡೆಟ್ಗಳು ಮತ್ತು ಸಿಬ್ಬಂದಿಯ ಸಂತೋಷ ಮತ್ತು ಸುರಕ್ಷಿತ ಪ್ರಯಾಣಕ್ಕೆ ಹಾರೈಸಿ ಸಂದೇಶ ನೀಡಿದರು.