ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ ನಡೆದಿದೆ ಎಂಬ ಶಂಕೆ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಪಾಟೀಲ ಆಸ್ಪತ್ರೆಯ ಹೆರಿಗೆ ಕೊಠಡಿ, ಸ್ಕ್ಯಾನಿಂಗ್ ಕೇಂದ್ರವನ್ನು ವಶಕ್ಕೆ ಪಡೆದು ಬಂದ್ ಮಾಡಿದ್ದಾರೆ.
ಗರ್ಭಪಾತಕ್ಕೆ ಒಳಗಾದ ಮಹಿಳೆಯ ಮನೆಗೆ ಭೇಟಿ ನೀಡಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು. ಬೇರೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಂಡಿದ್ದನ್ನು ಮಹಿಳೆ ತಿಳಿಸಿದ್ದು, ಅಲ್ಲಿಯೂ ಕಾರ್ಯಾಚರಣೆ ನಡೆಯಲಿದೆ.
ಮೂವರು ಪುತ್ರಿಯರನ್ನು ಹೆತ್ತಿರುವ ಮಹಿಳೆಯೊಬ್ಬರು ಗಂಡು ಮಗುವಿಗಾಗಿ ಗರ್ಭಿಣಿಯಾಗಿದ್ದರು. ಮಹಾಲಿಂಗಪುರದ ಸ್ಕ್ಯಾನಿಂಗ್ ಕೇಂದ್ರದಲ್ಲಿ ಸ್ಕ್ಯಾನ್ ಮಾಡಿಸಿದಾಗ ಹೆಣ್ಣು ಮಗುವಿದೆ ಎಂದು ಗೊತ್ತಾಯಿತು. ಪಾಟೀಲ ಆಸ್ಪತ್ರೆಗೆ ಬಂದು ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಆದರೆ, ಆ ಭ್ರೂಣ ಗಂಡು ಮಗುವಾಗಿತ್ತು’ ಎಂದು ತಿಳಿದು ಬಂದಿದೆ.
ಡಾ. ಸುವರ್ಣ ಕುಲಕರ್ಣಿ ಅವರೊಂದಿಗೆ ಮಾತನಾಡಿದ್ದೇನೆ. ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ತ್ವರಿತವಾಗಿ ಪಿಸಿಪಿಎನ್ಡಿ ಕಾಯ್ದೆ ಪ್ರಕಾರ ನ್ಯಾಯಾಲಯದಲ್ಲಿ ಖಾಸಗಿ ದೂರು ಮತ್ತು ಎಂಟಿಪಿ ಕಾಯ್ದೆ ಅನ್ವಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ತಿಳಿಸಿದ್ದಾರೆ.