ತುಮಕೂರು: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತ ಗರೀಬ್ ಸಾಬ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದ ಐದು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಮೃತದೇಹಗಳ ಅಂತಿಮ ದರ್ಶನ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೃತಪಟ್ಟಿರುವ ಕುಟುಂಬದ ಯಜಮಾನ ಗರೀಬ್ ಸಾಬ್ ಎಂಬವರು ಶಿರಾದಿಂದ ತುಮಕೂರು ನಗರಕ್ಕೆ ವಲಸೆ ಬಂದಿದ್ದರು. ತುಮಕೂರು ನಗರದಲ್ಲಿ ಚಿಕನ್ ಕಬಾಬ್ ಸೆಂಟರ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೆ ವ್ಯಾಪಾರ ವಹಿವಾಟಿಗಾಗಿ ಒಂದೂವರೆ ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರೂ. ಅಲ್ಲದೆ ಪ್ರತಿ ತಿಂಗಳು ಬಡ್ಡಿ ಹಣವನ್ನು ಕಟ್ಟುತ್ತಿದ್ದರು. ಆದರೆ ಇವರ ವ್ಯಾಪಾರದಲ್ಲಿ ಹಿನ್ನಡೆ ಆಗಿದ್ದರಿಂದ ಬಡ್ಡಿ ಹಣವನ್ನು ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಬಡ್ಡಿ ದಂಧೆಕೋರರು ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವರು ಹೇಳಿದರು.
ಮೀಟರ್ ಬಡ್ಡಿ ಮಾಡುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವುದು ಜಾಸ್ತಿಯಾಗಿದೆ. ತನಿಖೆಯ ನಂತರ ಎಲ್ಲ ವಿಚಾರಗಳು ಬಯಲಿಗೆ ಬರಲಿವೆ. ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.