ಚಾಮರಾಜನಗರ: ದೀಪ ಜ್ಯೋತಿ ಪ್ರಜ್ವಲನೆಯಿಂದ ಆತ್ಮ ಸ್ವರೂಪದ ಭಗವಂತನ ದರ್ಶನವನ್ನು ಮಾಡಿಕೊಳ್ಳಬಹುದು. ಆತ್ಮ ಸಾಕ್ಷಾತ್ಕಾರದ ಜ್ಯೋತಿಯನ್ನು ಮಾನವ ಹಾಗೂ ಸಮಾಜದ ಏಕತೆ ಹಾಗೂ ಸಂತೋಷ, ನೆಮ್ಮದಿಗಾಗಿ ಸ್ವೀಕರಿಸಬೇಕೆಂದು ಸಂಸ್ಕೃತಿ ಚಿಂತಕರು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಇಂದು ಸಂಜೆ ಋಗ್ವೇದಿ ಕುಟೀರದಲ್ಲಿರ ನಡೆದ ಶ್ರೀರಾಮೋತ್ಸವ ಹಾಗೂ ದೀಪ ಪ್ರಜ್ವಲನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರತಿಷ್ಠಾಪನೆಯ ಸಮಹೂರ್ತದಲ್ಲಿ ಭಾರತೀಯರ ಪ್ರತಿಯೊಂದು ಮನೆಯಲ್ಲೂ ಐದು ದೀಪಗಳನ್ನು ಹಚ್ಚುವ ಮೂಲಕ ಪ್ರತಿಯೊಬ್ಬರು ಭಗವಂತನ ದರ್ಶನವನ್ನು ಮಾಡಲು ಅವಕಾಶವಾಗಿದೆ ಎಂದರು.
ಜ್ಯೋತಿ ಕಿರಣ ಸ್ವರೂಪದಲ್ಲಿ ಮನಸ್ಸನ್ನು ಏಕಾತ್ಮಕತೆಗೆ ಕೊಂಡಯ್ಯ ಬಲ್ಲದು. ಏಕಾತ್ಮಕತೆಯಿಂದ ಮಾನವನ ದೃಷ್ಟಿ ಚಿಂತನೆ ಹಾಗೂ ಜೀವನ ಮೌಲ್ಯಗಳು ಉನ್ನತಿ ಸಾಧಿಸಲು ಸಾಧ್ಯವಾಗಲಿದೆ. ಪ್ರತಿ ಮನೆಯಲ್ಲೂ ಜ್ಯೋತಿ ಬೆಳಗಿಸುವ ಮೂಲಕ ಸದಾ ಕಾಲ ಆನಂದದಿಂದ ಸಂತೋಷದಿಂದ ಮನಸ್ಸುಗಳನ್ನು ಬೆಳೆಸಿಕೊಂಡು ಭಗವಂತನ ಸ್ವರೂಪವನ್ನು ಕಾಣಬೇಕು. ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿಯ ಮೂಲಕ ಭಾರತ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಸಾರಿದ ದಿನವಾಗಿದೆ ಹಾಗೆಯೇ ಜನವರಿ 22 ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿಯ ಪರಂಪರೆ ಸನಾತನ ಧರ್ಮದ ಆಧಾರವಾಗಿರುವ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆಯ ಮೂಲಕ ದೇಶದ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿ, ಅಯೋಧ್ಯೆ ರೂಪಗೊಳ್ಳುವ ಮೂಲಕ ಇಡೀ ವಿಶ್ವಕ್ಕೆ ಭವಿಷ್ಯದಲ್ಲಿ ಮಾದರಿಯಾಗಲಿದೆ. ಜನವರಿ 22 ಭಾರತದ ಸಂಸ್ಕೃತಿಯ ದಿನವಾಗಲಿದೆ. ಇಡೀ ವಿಶ್ವಕ್ಕೆ ಭಾರತದ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿ ಅಯೋಧ್ಯೆಯ ರೂಪಗೊಳ್ಳಲಿದೆ ಆ ಮೂಲಕ ಭಾರತದ ಶಕ್ತಿ ಮತ್ತಷ್ಟು ಪ್ರಖರವಾಗಲಿದೆ ಎಂದರು.
ಮೈಸೂರಿನ ಶಿಕ್ಷಕಿ ವಿಜಯಲಕ್ಷ್ಮಿ ಪಿ ವಿ ಮಾತನಾಡಿ, ಜ್ಯೋತಿ ಬೆಳಗಿಸುವ ಮೂಲಕ ನಾಡಿನ ಎಲ್ಲೆಡೆ ಶಾಂತತೆಯ ಭಾವನೆಯನ್ನು ಮೂಡಿಸಿ ಪ್ರಸನ್ನತೆಗೆ ಒಳಗಾಗಲು ಸಾಧ್ಯವಾಗಲಿದೆ. ಜ್ಯೋತಿ ಸ್ವರೂಪದಲ್ಲಿ ಮಹತ್ತರ ಸಾಧನೆಯನ್ನು ಸಾಧಿಸಲು ಅಂತಃ ಶಕ್ತಿಯನ್ನು ನೀಡುವುದು ಜ್ಯೋತಿಯ ಲಕ್ಷಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಸುರೇಶ್ ಜೋಶಿ, ರಾಜು, ಶ್ರಾವ್ಯ ಋಗ್ವೇದಿ ಇದ್ದರು.