ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏತರಿಕೆಯಾಗುತ್ತಿದೆ. ಇದರಿಂದ ಸಾರ್ವಜನಿಕರು ಆಯಾಸ, ತಲೆನೋವು ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಿರುಬಿಸಿಲಿನಲ್ಲೂ ದೇಹದ ಶಕ್ತಿಯನ್ನು ಕಾಪಾಡಿಕೊಂಡು ಚುರುಕಾಗಿರಲು ಇಲ್ಲಿದೆ ನೋಡಿ ಸುಲಭ ಟಿಪ್ಸ್.
ಈ ಬಿಸಿಲಿನಿಂದಾಗಿ ಸ್ವಲ್ಪ ಹೊತ್ತು ಹೊರಗೆ ಹೋದರೂ ದೇಹ ಬೇಗನೆ ಸುಸ್ತಾಗುತ್ತದೆ. ಇದರಿಂದಾಗಿ ತಲೆಸುತ್ತು, ತಲೆನೋವು ಮತ್ತು ಪ್ರಜ್ಞೆ ತಪ್ಪುವಂತಹ ಸಮಸ್ಯೆಗಳನ್ನು ಅನೇಕರು ಎದುರಿಸುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಈ ಟಿಪಸ್ಗಳನ್ನ ಫಾಲೋ ಮಾಡಿ.
ಈ ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ದಿನವಿಡೀ ಸಾಧ್ಯವಾದಷ್ಟು ನೀರು ಕುಡಿಯಿರಿ. ದಾಹವಾಗದಿದ್ದರೂ ನೀರು ಕುಡಿಯುತ್ತಿರಿ. ಇದರೊಟ್ಟಿಗೆ ಎಳನೀರು, ಲಿಂಬೂ ಪಾನಕ, ಮಜ್ಜಿಗೆಗಳನ್ನ ಕುಡಿಯಿರಿ. ಇವು ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ನೀಡುತ್ತವೆ. ಜೊತೆಗೆ ಕಲ್ಲಂಗಡಿ, ಕರ್ಬೂಜ, ಸೌತೆಕಾಯಿ ಮತ್ತು ಕಿತ್ತಳೆ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಉಳಿಯುತ್ತದೆ.
ಬೇಸಿಗೆಯಲ್ಲಿ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ.
ಕರಿದ (ಪ್ರೈಡ್), ಮಸಾಲೆ ಮತ್ತು ಎಣ್ಣೆಯುಕ್ತ ಆಹಾರಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ, ಆದ್ದರಿಂದ ಅವುಗಳನ್ನು ಸೇವಿಸುವುದನ್ನ ಕಡಿಮೆ ಮಾಡಿ. ಸಾಧ್ಯವಾದಷ್ಟು ಮೊಸರು, ಸಲಾಡ್, ಹೆಸರುಕಾಳು ಮತ್ತು ಸೊಪ್ಪುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಬೆಳಿಗ್ಗೆ ನೆನೆಸಿದ ಬಾದಾಮಿ ಮತ್ತು ಬಾಳೆಹಣ್ಣು ತಿನ್ನುವುದರಿಂದ ತಕ್ಷಣದ ಶಕ್ತಿ ದೊರೆಯುತ್ತದೆ.
ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ.
ಅನಿವಾರ್ಯವಾಗಿ ಹೊರಹೋಗಬೇಕಿದ್ದರೆ ಟೋಪಿ, ಸ್ಕಾರ್ಫ್ ಅಥವಾ ಛತ್ರಿಯನ್ನು ಬಳಸಿ.
ದೇಹವನ್ನು ತಂಪಾಗಿರಿಸಲು ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ.
ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಏನು ಮಾಡಬಾರದು ?
ಹೊರಗಿನಿಂದ ಬಂದ ತಕ್ಷಣ ಫ್ರಿಡ್ಜ್ನಲ್ಲಿಟ್ಟ ನೀರನ್ನ ಕುಡಿಯಬೇಡಿ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ನಂತರ ಸಾಮಾನ್ಯ ತಾಪಮಾನದ ನೀರನ್ನು ಕುಡಿಯಿರಿ.
ಮನೆಗೆ ಬಂದ ತಕ್ಷಣ ಸ್ನಾನ ಮಾಡುವುದು ಅಥವಾ ಬಟ್ಟೆ ಬದಲಿಸುವುದು ಬೇಡ. ಕನಿಷ್ಠ 5 ರಿಂದ 10 ನಿಮಿಷ ವಿಶ್ರಾಂತಿ ಪಡೆಯಿರಿ.
ತಕ್ಷಣವೇ ಎಸಿ (AC) ಹಾಕುವ ಬದಲು ಫ್ಯಾನ್ ಕೆಳಗೆ ಕುಳಿತು ದೇಹದ ಉಷ್ಣತೆ ಸಹಜ ಸ್ಥಿತಿಗೆ ಬರುವಂತೆ ನೋಡಿಕೊಳ್ಳಿ.
ಅತಿಯಾದ ತಂಪು ಆಹಾರ ಅಥವಾ ಐಸ್ಕ್ರೀಮ್ ಸೇವಿಸಬೇಡಿ; ಇದರಿಂದ ಗಂಟಲು ನೋವು ಕಾಣಿಸಿಕೊಳ್ಳಬಹುದು.
ಬಿಸಿಲಿನಲ್ಲಿ ದೇಹ ಬೇಗನೆ ದಣಿಯುವುದರಿಂದ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಿ.
ಬೆಳಿಗ್ಗೆ ಅಥವಾ ಸಂಜೆ ವೇಳೆ ಹಗುರವಾದ ವ್ಯಾಯಾಮ ಮಾಡಿ. ಯೋಗ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ದೇಹ ತಂಪಾಗಿರುತ್ತದೆ.



