ಮಂಡ್ಯ: ಗ್ರಾಮ/ ಹಳ್ಳಿಗಳಲ್ಲಿ ಜನಸಾಮಾನ್ಯರಿಗೆ ದಂತ ಚಿಕಿತ್ಸೆ ಪಡೆಯಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಾಜ್ಯದಲ್ಲೇ ಪ್ರಥಮ ಬಾರಿಗೆ ಆರೋಗ್ಯ ಇಲಾಖೆಯಿಂದ ಗ್ರಾಮಗಳಲ್ಲಿ ಮುಗಳ್ನಗೆಯ ಸಿಂಚನ ಯೋಜನೆ ಪ್ರಾರಂಭಿಸಿದ್ದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಇಂದು ಮಿಮ್ಸ್ ಅಡಿಟೋರಿಯಂನಲ್ಲಿ ಚಾಲನೆ ನೀಡಿದರು. ದಂತ ಚಿಕಿತ್ಸೆಗೆ ಬಳಸುವ ಯಂತ್ರಗಳು ದುಬಾರಿಯಾಗಿದ್ದು, ಚಿಕಿತ್ಸಾ ವೆಚ್ಚವು ದುಬಾರಿಯಾಗಿರುತ್ತದೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನರು ದಂತ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ.
ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ದಂತ ಆರೋಗ್ಯ ಹಳ್ಳಿಯ ಕಡೆಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ ಕಾರ್ಯಕ್ರಮವು ಆರಂಭಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಎಲ್ಲಾ ಜನರು ಇದರ ಸದುಪಯೋಗ ಪಡೆಯಿರಿ ಎಂದರು.
ತಾಲೂಕಿನ ಪ್ರತಿ ಗ್ರಾಮದ Pಊಅ/ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಶಿಬಿರಗಳಿಗೆ ಸಂಚಾರಿಸಿ ತಜ್ಞ ದಂತ ವೈದ್ಯರು ಸಿಬ್ಬಂದಿಗಳು ಉಚಿತವಾಗಿ ಸ್ಥಳದಲ್ಲೇ ಕೆಲವು ಸರ್ವೇ ಸಾಮಾನ್ಯ ಬಾಯಿ ದಂತ ಕಾಯಿಲೆಗೆ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ ಕಾರ್ಯಕ್ರಮವು ಯಶಸ್ವಿಯಾಗಲೆಂದು ಹಾರೈಸಿದರು. ಆರೋಗ್ಯ ಇಲಾಖೆಗೆ ಹಾಗೂ ಎಲ್ಲಾ ವೈದ್ಯರಿಗೆ ಅಭಿನಂದನೆಗಳನ್ನು ತಿಳಿಸಿದರು.