ಯಳಂದೂರು: ಬ್ರಿಟಿಷರಿಂದ ಹಲವರ ತ್ಯಾಗ ಬಲಿದಾನಗಳ ನಂತರ ನಮಗೆ ಸ್ವತಂತ್ರ ಲಭಿಸಿದೆ. ಸ್ವತಂತ್ರ ಗೊಂಡ ಭಾರತದ ಪ್ರಗತಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಮಹತ್ವದ ಪಾತ್ರವನ್ನು ವಹಿಸಿದೆ. ಇದು ಇಂದಿಗೂ ಕೂಡ ಪ್ರಸ್ತುತವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ೭೯ ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ದೇಶ ಇಂದು ವಿಶ್ವದ ಭೂಪಟದಲ್ಲಿ ಮುಂದುವರೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ. ಇದರೊಂದಿಗೆ ದೇಶಕ್ಕೆ ಶತ್ರು ರಾಷ್ಟ್ರಗಳ ಕಾಟವೂ ಹೆಚ್ಚಿದೆ. ಇದನ್ನು ನಿಯಂತ್ರಿಸಲು ನಮ್ಮ ದೇಶ ಶಕ್ತವಾಗಿದೆ. ನಾವೆಲ್ಲಾ ಎಲ್ಲಾ ಜಾತಿ, ಧರ್ಮ, ಪಕ್ಷಬೇಧವನ್ನು ಮರೆತು ದೇಶದ ಪ್ರಗತಿಗೆ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕನಾಗಿ ನಾನು ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆದ್ದ ನಂತರ ಅನೇಕ ಜನಪರ ಕೆಲಸಗಳು ನಡೆದಿವೆ. ೨೫ ಕೋಟಿ ರೂ. ವಿಶೇಷ ಅನುದಾನವನ್ನು ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ನೀಡಿದ್ದೇನೆ. ನೀರಾವರಿ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಅನುದಾನ ಲಭಿಸಿದೆ. ಯಳಂದೂರು ಪಟ್ಟಣದಲ್ಲಿ ೩೫ ಕೋಟಿ ರೂ. ವೆಚ್ಚದ ಆಸ್ಪತ್ರೆ ಕಾಮಗಾರಿ ಆರಂಭಗೊಂಡಿದೆ. ಕೊಳ್ಳೇಗಾಲದಲ್ಲಿ ಮತ್ತೊಂದು ಜಿಲ್ಲಾಮಟ್ಟದ ಆಸ್ಪತ್ರೆಗೆ ಸ್ಥಳ ಗುರುತಿಸಲಾಗಿದ್ದು ಆದಷ್ಟು ಬೇಗ ಈ ಕಾಮಗಾರಿಯೂ ಆರಂಭಗೊಳ್ಳಲಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಳಿಗಿರಿರಂಗನಬೆಟ್ಟ, ವೈ.ಕೆ.ಮೋಳೆ ರಸ್ತೆ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. ಈಗ ಶಾಸಕರಿಗೆ ೫೦ ಕೋಟಿ ರೂ. ವಿಶೇಷ ಅನುದಾನ ಮತ್ತೆ ಲಭಿಸಿದೆ. ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಭಾಷಣಕಾರ ಗೋವಿಂದರಾಜು ಮಾತನಾಡಿದರು, ತಹಶೀಲ್ದಾರ್ ಎಸ್.ಎಲ್. ನಯನ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳ ನೃತ್ಯ, ಪೊಲೀಸ್ ಇಲಾಖೆ ಮತ್ತು ಶಾಲಾ ಮಕ್ಕಳು ನಡೆಸಿಕೊಟ್ಟ ಪರೇಡ್ ಗಮನ ಸೆಳೆಯಿತು.
ಪಫಂ ಅಧ್ಯಕ್ಷೆ ಬಿ. ಲಕ್ಷ್ಮಿಮಲ್ಲು, ಮಹೇಶ್, ವೈ.ಜಿ. ರಂಗನಾಥ, ಸುಶೀಲಾಪ್ರಕಾಶ್, ಸವಿತಾ ಬಸವರಾಜು, ಪ್ರಭಾವತಿ ರಾಜಶೇಖರ, ಬಿ.ರವಿ, ಮಂಜು, ಮಹದೇವನಾಯಕ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮುನವ್ವರ್ ಬೇಗ್ ಮುಖ್ಯಾಧಿಕಾರಿ ಎಂ.ಪಿ. ಮಹೇಶ್ಕುಮಾರ್ ಬಿಇಒ ಮಾರಯ್ಯ, ಸರ್ಕಾರಿ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ನಂಜುಂಡಯ್ಯ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ರಜಸ್ವ ನಿರೀಕ್ಷಕ ಯದುಗಿರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್ ಸೇರಿದಂತೆ ವಿವಿಧ ಇಲಾಖೆಗಳ ನೌಕರರು, ಶಾಲಾ ಕಾಲೇಜು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.