ಚಿಕ್ಕಮಗಳೂರು : ಶೃಂಗೇರಿಯ ಕೆರೆಮನೆ ಗ್ರಾಮದಲ್ಲಿ ಕಾಡಿಗೆ ಸೊಪ್ಪು ತರಲು ಹೋಗಿದ್ದವರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ದುಬಾರೆ, ಹಾರಂಗಿ ಆನೆ ಶಿಬಿರದ ಸಾಕಾನೆಗಳಿಂದ ಕಾಡಾನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ ನಡೆಯುತ್ತಿದೆ. ಏಕಲವ್ಯನ ನೇತೃತ್ವದಲ್ಲಿ ಪುಂಡಾನೆ ಸೆರೆಗೆ ಕಾರ್ಯಾಚರಣೆ ನಡೆಯಲಿದೆ. ಇಂದು ಸಹ ಕಾಡಾನೆಗಳು ತೋಟದ ಮೇಲೆ ದಾಳಿ ನಡೆಸಿ, ಅಡಿಕೆ ಹಾಗೂ ಬಾಳೆಗಿಡಗಳನ್ನು ನಾಶ ಮಾಡಿವೆ.
ಅ.31 ರಂದು ಕಾಡಾನೆ ದಾಳಿಯಿಂದ ಸ್ಥಳದಲ್ಲೇ ಉಮೇಶ್ ಮತ್ತು ಹರೀಶ್ ಎಂಬವರು ಸಾವನ್ನಪ್ಪಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ
ಹೊರಹಾಕಿದ್ದರು.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸಚಿವ ಕೆ.ಜೆ ಜಾರ್ಜ್ ಅವರಿಗೂ ರೈತ ಮುಖಂಡರು ಮನವಿ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ರೈತರ ಬಳಿ ಎಚ್ಚರಿಕೆಯಿಂದ ಇರಿ ಎನ್ನುತ್ತಾರೆ. ಹಾಗಂತ ರೈತರು ಕೆಲಸಕ್ಕೆ ಹೋಗದೇ ಇರಲು ಸಾಧ್ಯವಿಲ್ಲ. ಕಾಡಾನೆ ಉಪಟಳ ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.



