ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರವಾಸಿ ಮಂದಿರದ ಆವರಣದಲ್ಲಿರುವ ಮೈಸೂರು ಸಂಸ್ಥಾನದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗೆ ಪುಷ್ಪ ಅರ್ಪಿಸುವ ಮೂಲಕ ಜನ್ಮ ದಿನ ಹಾಗು ನಾಲ್ವಡಿ ಸಂಭ್ರಮ ಅಭಿಯಾನ ಉದ್ಘಾಟಿಸಲಾಯಿತು.
ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಮಹಮ್ಮದ್ ಅಸ್ಗರ್ ರವರು ಉದ್ಘಾಟಿಸಿ ಮೈಸೂರು ಮತ್ತು ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ಹಲವು ಜಿಲ್ಲೆಗಳು ಸೇರಿದಂತೆ ಮೈಸೂರು ಮಹಾರಾಜರ ಋಣಭಾರದಲ್ಲಿ ಇದ್ದೇವೆ. ಮೈಸೂರು ಪ್ರಾಂತ್ಯ ಅಭಿವೃದ್ಧಿಯಾಗಲು ಮಹಾರಾಜರ ದೂರ ದೃಷ್ಟಿ ಆಡಳಿತವೇ ಕಾರಣ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರ್ಯಕ್ರಮವನ್ನು ರೂಪಿಸಿ ಅವರ ಸೇವೆಯನ್ನು ಸ್ಮರಿಸಿಕೊಳ್ಳುವ ಅವಕಾಶ ನೀಡಿದ ಸರ್ವರಿಗೂ ಧನ್ಯವಾದಗಳು ಜಯಂತಿಯನ್ನು ರಾಜ್ಯದ ಎಲ್ಲೆಡೆ ಆಚರಿಸುವ ಮೂಲಕ ಗೌರವ ಸಲ್ಲಿಸುವ ಕಾರ್ಯಕ್ರಮ ರೂಪಿಸಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು. ಅವರ ಜನ್ಮದಿನ ನಾಡಿನ ಸಂಭ್ರಮದ ದಿನವಾಗಬೇಕು . ಕಲೆ ಸಾಹಿತ್ಯ ಸಂಗೀತ ನೃತ್ಯ, ವಾಸ್ತುಶಿಲ್ಪ, ಕಟ್ಟಡಗಳು ,ನೀರಾವರಿ ,ಶಿಕ್ಷಣ ,ಕೈಗಾರಿಕೆ ಗುಡಿ ಕೈಗಾರಿಕೆ ,ಮಹಿಳಾ ಶಿಕ್ಷಣ, ಪ್ರಜಾಪ್ರಭುತ್ವ ,ಸಾಹಿತ್ಯ, ಸ್ವಾತಂತ್ರ, ಸಮಾನತೆ ,ಭ್ರಾತೃತ್ವ, ಅಭಿವೃದ್ಧಿ, ರಸ್ತೆ,ಕೆರೆ,ಕಾಲುವೆ, ಸೇತುವೆ, ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿಯೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಆಡಳಿತ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ .ಇಡೀ ಜೀವನವನ್ನು ಸಂಸ್ಥಾನದ ಅಭಿವೃದ್ಧಿಗೆ ನೀಡಿ ಮೈಸೂರು ನಗರವನ್ನು ವಿಶ್ವ ಪ್ರಸಿದ್ಧಿ ಯನ್ನಾಗಿ ಮಾಡಿದ್ದಾರೆ. ಚಾಮರಾಜನಗರ ಮೈಸೂರು ಸಂಸ್ಥಾನದ ಅವಿಭಾಜ್ಯ ಅಂಗವಾಗಿದ್ದು ಮಹಾರಾಜರ ರಾಜಮನೆತನದ ಅವಿನಾಭಾವ ಸಂಬಂಧ ಇದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೌಜನ್ಯ, ಪ್ರಜಾವಾತ್ಸಲ್ಯ ,ಪ್ರೀತಿ, ಕರುಣೆ, ವಿಶ್ವಾಸ, ದಕ್ಷ, ಆಡಳಿತ, ಪ್ರಗತಿಪರ, ಉದಾರ ತತ್ವಗಳ ಪೋಷಕರಾಗಿ ಸಾಹಿತ್ಯ ಸಂಸ್ಕೃತಿಯ ಪುರುಷರಾಗಿ ವಿಶ್ವದಲ್ಲೇ ಮಾದರಿಯಾದ ಆಡಳಿತವನ್ನು ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮರೆಯಲು ಸಾಧ್ಯವಿಲ್ಲ. ಚಾಮರಾಜೇಶ್ವರ ರಥೋತ್ಸವದ ಸಂದರ್ಭದಲ್ಲಿ ಮಹಾರಾಜರಿಗೆ ಮಹಾ ಗೌರವವನ್ನು ಸಲ್ಲಿಸುವ ಸಂಪ್ರದಾಯ ಇಂದಿಗೂ ಇರುವುದು ನಾವೆಲ್ಲರೂ ಕಾಣಬಹುದು. ಸಾಹಿತ್ಯ ಪರಿಷತ್ತಿನ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ ಅಭಿವೃದ್ಧಿಯ ವಿಚಾರ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲೂ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವಿಚಂದ್ರ ಪ್ರಸಾದ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ಸಾಹಿತ್ಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿ ಅವರ ಸಂಸ್ಥಾನದಲ್ಲಿ ವಿಶ್ವದ ಶ್ರೇಷ್ಠ ಸಾಹಿತಿಗಳನ್ನು ಪ್ರೋತ್ಸಾಹಿಸಿ ,ಸ್ವತಃ ಕವಿಯಾಗಿ, ಸಾಹಿತಿಯಾಗಿ ಕೃತಿಗಳನ್ನು ರಚಿಸಿ , ಕಲೆಯ ಪೋಷಕರಾಗಿ ಕಲೆ, ಜನಪದ ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ , ಎಲ್. ಶಿವಲಿಂಗಮೂರ್ತಿ, ಬಿಕೆ ಆರಾ, ದೊರೆ, ಮಹೇಶ್ ಇದ್ದರು.