ಚಿಂತಾಮಣಿ: ಗ್ರಾಮಾಂತರ ಠಾಣೆಯ ವಿಶೇಷ ಪತ್ತೆದಾರಿ ತಂಡದ ಪೊಲೀಸರು ನಾಲ್ವರು ಕಳ್ಳರನ್ನು ಬಂಧಿಸಿ ಅವರಿಂದ ೮.೮೭ ಲಕ್ಷ ರೂ ಬೆಲೆ ಬಾಳುವ ಕದ್ದಿರುವ ವಾಹನಗಳು, ನಗದು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಶಾಹೀಲ್ ಖಾನ್, ಕೋಲಾರದ ರೆಹಮತ್ ನಗರದ ತನ್ವೀರ್ ಮತ್ತು ಇಬ್ರಾಹಿಂ ಪಾಷಾ, ಶ್ರೀನಿವಾಸಪುರ ಪಟ್ಟಣದ ಇಂದ್ರಾನಗರದ ಸುಲ್ತಾನ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ನಾಲ್ಕು ಪ್ರಕರಣಗಳು, ಬೆಂಗಳೂರಿನ ಮಹದೇವಪುರ ಠಾಣೆಯ ಒಂದು ಪ್ರಕರಣ ಹಾಗೂ ಮುಳಬಾಗಿಲು ಠಾಣೆಯ ಒಂದು ಪ್ರಕರಣ ಪತ್ತೆಯಾಗಿದ್ದು ೮,೮೭,೨೦೦ ಬೆಲೆ ಬಾಳುವ ವಾಹನ, ನಗದು, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಠಾಣೆ ವ್ಯಾಪ್ತಿಯ ವೆಂಕಟಗಿರಿಕೋಟೆಯ ನಿವಾಸಿ ಅಜಯಕುಮಾರ್ ಎಂಬುವವರು ಕಾರಿನ ಬ್ಯಾಟರಿ ಹಾಗೂ ಇತರೆ ಗುಜರಿ ವಸ್ತುಗಳು ಕಳ್ಳತನವಾಗಿವೆ ಎಂದು ಜನವರಿ ೧೯ ರಂದು ದೂರು ನೀಡಿದ್ದರು. ಜತೆಗೆ ಇತರೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಪತ್ತೆ ಮಾಡಲು ಎಸ್ಪಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವಿಶೇಷ ಪತ್ತೆದಾರಿ ತಂಡವನ್ನು ರಚಿಸಿದ್ದರು. ಪತ್ತೆದಾರಿ ತಂಡವು ಎಸ್ಪಿ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು.
ಪತ್ತೆದಾರಿ ತಂಡವು ವಿವಿಧ ಆಯಾಮಗಳಲ್ಲಿ ವೈಜ್ಞಾನಿಕ ತನಿಖೆ ನಡೆಸಿ ಅರೋಪಿಗಳನ್ನು ಬಂಧಿಸಿದ್ದಾರೆ. ಪತ್ತೆದಾರಿ ತಂಡದಲ್ಲಿ ಇನ್ಸ್ ಸ್ಪೆಕ್ಟರ್ ಶಿವರಾಜು, ಸಬ್ ಇನ್ಸ್ ಸ್ಪೆಕ್ಟರ್ಗಳಾದ ಮಮತ, ನಾಗೇಂದ್ರ ಪ್ರಸಾದ್, ಸಿಬ್ಬಂದಿಯವರಾದ ದಿನೇಶ್, ನರಸಿಂಹ, ಮಂಜುನಾಥರೆಡ್ಡಿ, ನಮದಕುಮಾರ್, ರಾಮಾಂಜನೇಯ, ಅರುಣ್, ಕೃಷ್ಣಮೂರ್ತಿ, ಶರಣಬಸವ, ಸ್ರೀನಿವಾಸ್ ತಂಡದಲ್ಲಿದ್ದರು ಎಂದು ಪೊಲೀಸರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.