ಶ್ರೀರಂಗಪಟ್ಟಣ: ಸಮೀಪದ ಶ್ರೀದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠ ಡಿಎಂಎಸ್ ಚಂದ್ರವನ ಆಶ್ರಮದಲ್ಲಿ ಜ.26ರಿಂದ 28ರ ವರೆಗೆ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ 130ನೇ ಜಯಂತಿ ಹಾಗೂ ಶ್ರೀಕ್ಷೇತ್ರ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಯ 25ನೇ ವರ್ಷದ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭ ನಡೆಯಲಿದೆ.
ಜ.26ರಂದು ಬೆಳಿಗ್ಗೆ 6ಕ್ಕೆ ನವಗ್ರಹ ಪೂಜೆ,ಮೃತ್ಯುಂಜಯ ಪೂಜೆ, ನವದುರ್ಗಿಯರ ಪೂಜೆ, ಪ್ರಧಾನ ಕಳಸ ಪೂಜಾಕಾರ್ಯ, ಬೆಳಿಗ್ಗೆ 8ಕ್ಕೆ ನಂಜನಗೂಡು ತಾಲೂಕಿನ ಬಸವನಪುರ ಶ್ರೀ ಮಲ್ಲನಮೂಲೆಮಠದ ಷ.ಬ್ರ.ಸ್ವ.ಚನ್ನಬಸವ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಆರಂಭಗೊಳ್ಳಲಿದೆ ಎಂದು ವಿವರಿಸಿದರು.
ಶಿವಾಚಾರ್ಯ ಸ್ವಾಮೀಜಿ ಚಂದ್ರವನ ಸಿರಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡುವರು.ಸಂಜೆ 6.30ಕ್ಕೆ ಡಿಎಂಎಸ್ ಜ್ಞಾನಕುಟೀರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮಗಳು ನಡೆಯಲಿವೆ. ಮಠದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ,
ಬೆಳಗಾವಿ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ,ಷ.ಬ್ರ.ಸ್ವ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮ.ನಿ.ಪ್ರ. ಕಲ್ಯಾಣ ಸ್ವಾಮೀಜಿ ದಿವ್ಯ ಸಮುಖದಲ್ಲಿ ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಉದ್ಘಾಟಿಸುವರು. ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಎಚ್.ಶಿವರಾಮೇಗೌಡ, ಬಿಇಒ ಬಿ.ಚಂದ್ರಶೇಖರ್ ಭಾಗವಹಿಸುವರು.
ಜ.27ರಂದು ಬೆಳಿಗ್ಗೆ 6ಕ್ಕೆ ಶ್ರೀ ಕಾಶಿಚಂದ್ರಮೌಳೇಶ್ವರ ಸ್ವಾಮಿ ಹಾಗೂ ಪರಿವಾರ ದೇವತೆಗಳಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಕುಂಕುಮಾರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಶ್ರೀಗಳಿಗೆ ತುಲಾಭಾರ ಸೇವೆ, ಬೆಳಿಗ್ಗೆ 10ಕ್ಕೆ ಭಕ್ತಿಗೀತೆ ಮತ್ತು ವಚನ ಗಾಯನ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಶ್ರೀ ತ್ರಿನೇತ್ರ ಅಂತರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರದ 3ನೇ ವರ್ಷದ ಘಟಿಕೋತ್ಸವ ಸಮಾರಂಭ ನಡೆಯಲಿದೆ.ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ದಿವ್ಯ ಸಾನಿಧ್ಯ, ತುಮಕೂರಿನ ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಸ್ಕೋಪ್ ಫೌಂಡೇಷನ್ನ ಚೇರ್ಮನ್ ಡಾ.ಎಲ್.ಎನ್.ಮೂರ್ತಿ ಹಲ್ಲೇಗೆರೆ, ಅಭಿನವ ಭಾರತಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನದ ಅರ್ಚಕ ಬಸವರಾಜ ಗುರೂಜಿ, ಏರೋಸ್ಪೇಸ್ನ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್, ಆಯುಷ್ ಇಲಾಖೆಯ ನಿವೃತ್ತ ನಿರ್ದೇಶಕ ಗಾ.ನಶ್ರೀಕಂಠಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ಪ್ರಮಾಣ ವಚನ ಬೋಧನೆ, 1008 ಗಿಡಗಳ ಉಚಿತ ವಿತರಣೆ ನಡೆಯಲಿದೆ. ಸಂಜೆ 4.30ಕ್ಕೆ ಸಂತರ ಸಮಾಗಮ ನಡೆಯಲಿದ್ದು,ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 80 ಪ್ರಮುಖ ಮಠಗಳ ಸ್ವಾಮೀಜಿಗಳು ಸಾನಿಧ್ಯ ವಹಿಸುವರು.ಸಂಜೆ 6.30ಕ್ಕೆ ಕಾವೇರಿ ದೀಪಾರತಿ ನಡೆಯಲಿದೆ.
ಜ.28ರಂದು ಬೆಳಿಗ್ಗೆ 7.35ಕ್ಕೆ ಮಠದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗೆ ಪಾದಪೂಜೆ, ಪುಷ್ಪವೃಷ್ಟಿ, ಬಿಲ್ವಾರ್ಚನೆ, ಆರತಿ ಮತ್ತು ಗುರುವಂದನೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು, ವಿಶೇಷ ಲಕೋಟೆ ಮತ್ತು ಅಂಚೆಚೀಟಿ ಬಿಡುಗಡೆ, ಫಲಪ್ರದಾಯಿನಿ ಶ್ರೀ ಪಾರ್ವತಿದೇವಿ ವ್ರತ-ಕಥೆ ಪುಸ್ತಕ ಬಿಡುಗಡೆ, ಪುಸ್ತಕ ಮಳಿಗೆ ಉದ್ಘಾಟನೆ ನಡೆಯಲಿದೆ. ಸಮಾರಂಭದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸುವರು. ಹಿರಿಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಸಮರ್ಪಣೆ ನಡೆಯಲಿದೆ.
ಶಾಸಕ ಬಸವರಾಜ್ನೀಲಪ್ಪ ಶಿವಣ್ಣನವರ್ ಹಾಗೂ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಭಾಗವಹಿಸುವರು. ಶಿವಯೋಗಿ ದರ್ಶನ ಅಭಿವಂದನಾ ಗ್ರಂಥವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಜ್ವಾಮಿ ಬಿಡುಗಡೆ ಮಾಡುವರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುವರು. ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು, ಸಚಿವರು,ಸಾಹಿತಿಗಳು, ಅಧಿಕಾರಿಗಳು ಭಾಗವಹಿಸುವರು.
ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ
ನಾಥ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಡಿಎಂಎಸ್ ಆಯುರ್ವೇದ ಆಸ್ಪತ್ರೆ ಉದ್ಘಾಟಿಸುವರು.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತ್ರಿನೇತ್ರ ಶ್ರೀ ಜಲಯೋಗ ಪುಸ್ತಕ ಹಾಗೂ ಶತಾಯುಷಿ ಶ್ರೀ ಮರಿದೇವರ ಶಿವಯೋಗ ಚರಿತೆ ಕೃತಿ ಲೋಕಾರ್ಪಣೆ ಮಾಡುವರು. ಧ್ಯಾನಮಂದಿರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.