ರಾಯ್ಪುರ : ಮೇ 10 ರಂದು ರಾಯ್ಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋಲು ಕಂಡ ಬಳಿಕ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದ್ದು, ಈ ಸೋಲಿನ ತಕ್ಷಣವೇ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್ನಲ್ಲಿ ಫ್ರಾಂಚೈಸಿಯನ್ನು ಅನ್ಫಾಲೋ ಮಾಡಿದ್ದಾರೆ ಎಂದು ಅಭಿಮಾನಿಗಳು ಗಮನಿಸಿದ ನಂತರ, ಅವರ ಮುಂಬೈ ಇಂಡಿಯನ್ಸ್ ಭವಿಷ್ಯದ ಬಗ್ಗೆ ಹೊಸ ಊಹಾಪೋಹಗಳು ಹುಟ್ಟಿಕೊಂಡಿದೆ.
ಪಾಂಡ್ಯ ಅನ್ಫಾಲೋ ಮಾಡಿದ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಯಿತು, ಅನೇಕರು ಇದನ್ನು ಮುಂಬೈನ ಕಠಿಣ ಋತುವಿನ ಸುತ್ತ ಬೆಳೆಯುತ್ತಿರುವ ವದಂತಿಗಳೊಂದಿಗೆ ಹೋಲಿಕೆ ಮಾಡಿ ಮುಂದಿನ ಆವೃತ್ತಿಯಲ್ಲಿ ಪಾಂಡ್ಯಗೆ ಗೇಟ್ಪಾಸ್ ಖಚಿತ ಎನ್ನಲಾರಂಭಿಸಿದ್ದಾರೆ.
ಅವರ ಫಾಲೋಯಿಂಗ್ ಪಟ್ಟಿ 151ರಿಂದ 150ಕ್ಕೆ ಇಳಿದಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ ಹೆಸರು ಕಾಣಿಸದಿರುವ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಕೆಲವೇ ನಿಮಿಷಗಳಲ್ಲಿ ಮತ್ತೆ ಅವರು ಫ್ರಾಂಚೈಸಿಯನ್ನು ಫಾಲೋ ಮಾಡಿರುವುದು ಕಂಡುಬಂದಿತು.
ಈ ಘಟನೆಯ ಬೆನ್ನಲ್ಲೇ, ಮುಂದಿನ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿರಲಾರರೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈಗಾಗಲೇ ಕಠಿಣ ಸೀಸನ್ ಎದುರಿಸಿದ್ದ ಮುಂಬೈ ಇಂಡಿಯನ್ಸ್ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಹಾರ್ದಿಕ್ಗೆ ಈ ಸೀಸನ್ ಹೆಚ್ಚು ಯಶಸ್ಸಿನದ್ದಾಗಿರಲಿಲ್ಲ. ಎಂಟು ಪಂದ್ಯಗಳಲ್ಲಿ ಅವರು ಕೇವಲ 146 ರನ್ ಗಳಿಸಿದ್ದು, ನಾಲ್ಕು ವಿಕೆಟ್ಗಳನ್ನು ಮಾತ್ರ ಪಡೆದರು. ಗಾಯದ ಸಮಸ್ಯೆಗಳು ಕೂಡ ಅವರನ್ನು ಕಾಡಿದವು. ಬೆನ್ನುನೋವು ಹಾಗೂ ಫಿಟ್ನೆಸ್ ಸಮಸ್ಯೆಯಿಂದಾಗಿ ಅವರು ಮೂರು ಪಂದ್ಯಗಳನ್ನು ಮಿಸ್ ಮಾಡಿದ್ದರು.
ಇನ್ನೊಂದೆಡೆ, ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ನೀಡಿದ್ದ 167 ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತು. ವಿರಾಟ್ ಕೊಹ್ಲಿ ಹಾಗೂ ಟಿಮ್ ಡೇವಿಡ್ ಶೂನ್ಯಕ್ಕೆ ಔಟಾದ ಕಾರಣ ಒತ್ತಡ ಹೆಚ್ಚಾಯಿತು. ಆದರೆ ಕೃಣಾಲ್ ಪಾಂಡ್ಯ 73 ರನ್ಗಳ ಅದ್ಭುತ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದರು.
ಕೊನೆಯ ಎರಡು ಓವರ್ಗಳಲ್ಲಿ ಆರ್ಸಿಬಿಗೆ 18 ರನ್ ಅಗತ್ಯವಿದ್ದಾಗ ಜಸ್ಪ್ರೀತ್ ಬುಮ್ರಾ 19ನೇ ಓವರ್ನಲ್ಲಿ ಕೇವಲ ಮೂರು ರನ್ ಮಾತ್ರ ನೀಡಿದರು. ಅಂತಿಮ ಓವರ್ನಲ್ಲಿ 15 ರನ್ ಬೇಕಿದ್ದ ಸಂದರ್ಭದಲ್ಲಿ ಯುವ ಬೌಲರ್ ರಾಜ್ ಬಾವಾ ಮೂರು ವೈಡ್ ಹಾಗೂ ಒಂದು ನೋಬಾಲ್ ನೀಡಿ ಒತ್ತಡಕ್ಕೆ ಒಳಗಾದರು. ಈ ಹೆಚ್ಚುವರಿ ರನ್ಗಳು ಆರ್ಸಿಬಿಗೆ ನೆರವಾದವು. ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿದ್ದಾಗ ರಸಿಕ್ ಚುರುಕುತನದಿಂದ ರನ್ ಕಲೆಹಾಕಿ ಆರ್ಸಿಬಿಗೆ ರೋಚಕ ಜಯ ತಂದುಕೊಟ್ಟರು.



