ಬೆಂಗಳೂರು : ಕಳೆದ ಕೆಲ ದಿನಗಳ ಹಿಂದೆ ನಗರದ ಹೊರವಲಯದಲ್ಲಿರುವ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರ ಸಂಚಾರ ಮಾರ್ಗದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಂದು ಸ್ಥಳದಲ್ಲಿ ಬಂದೋಬಸ್ಗೆ ನಿಯೋಜನೆಗೊಂಡಿದ್ದ ಕರ್ತವ್ಯದಲ್ಲಿದ್ದ ಪಿಎಸ್ಐ ಸೇರಿದಂತೆ ಒಟ್ಟು ಏಳು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.
ಅಮಾನತುಗೊಂಡವರಲ್ಲಿ ಸಾತನೂರು ಠಾಣೆ ಪಿಎಸ್ಐ ದುರ್ಗೆಗೌಡ, ಕಗ್ಗಲೀಪುರ ಠಾಣೆ ಎಎಸ್ಐ ಶಂಕರ, ರಾಮನಗರ ಟೌನ್ ಠಾಣೆಯ ಹೆಡ್ ಕಾನ್ಸ್ಟೆಬಲ್ಗಳಾದ ಡಿ.ವಿ.ಪ್ರಕಾಶ್, ಶರತ್ ಕುಮಾರ್, ರವಿ ಟಿ., ಗೋವಿಂದರಾಜು ಹಾಗೂ ಹಾಸನ ಎಎಸ್ಪಿ ತಂಡದ ಸುರೇಶ್ ಬಾಬು ಸೇರಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಈ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ಸಂಚಾರ ಮಾರ್ಗದಲ್ಲೇ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ವಿಐಪಿ ಭದ್ರತಾ ವ್ಯವಸ್ಥೆಯ ಗಂಭೀರ ವೈಫಲ್ಯವೆಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ. ಜಿಲೆಟಿನ್ ಕಡ್ಡಿಗಳು ಅಲ್ಲಿ ಹೇಗೆ ಬಂದವು, ಭದ್ರತಾ ತಪಾಸಣೆಯಲ್ಲಿ ಎಲ್ಲಿ ಲೋಪವಾಯಿತು ಹಾಗೂ ಇದರ ಹಿಂದೆ ಯಾರಾದರೂ ಪಾತ್ರವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



