ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಐತಿಹಾಸಿಕ ಹಿನ್ನೆಲೆಯ ಬೆಟ್ಟದಪುರದ ಶ್ರೀ ಬ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮ ರಥೋತ್ಸವ ಫೆಬ್ರವರಿ 13ರಂದು ನಡೆಯಲಿದೆ.
ಫೆಬ್ರವರಿ 12ರಂದು ರಾತ್ರಿ ಗ್ರಾಮದ ಹೃದಯ ಭಾಗದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗಿರಿಜಾ ಕಲ್ಯಾಣೋತ್ಸವ ನೆರವೇರಲಿದೆ. ಮರುದಿನ ಗುರುವಾರ ಬೆಳಿಗ್ಗೆ ಮೂರು ರಥಗಳ ಮೇಲೆ ಬೆಳ್ಳಿ ಬಸಪ್ಪ ಗಣಪತಿ ಹಾಗೂ ಗಿರಿಜಮ್ಮ ಮಲ್ಲಯ್ಯ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಗುವುದು.
ರಥೋತ್ಸವದ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ಫೆಬ್ರವರಿ 7 ರಿಂದ ಆರಂಭವಾಗಿದ್ದು , ಮೊದಲ ದಿನ ದೇವಸ್ಥಾನದಲ್ಲಿ ಗಣಪತಿ ಪೂಜೆ, ಪುಣ್ಯಹ, 8 ರಂದು ಮೂಲ ದೇವರ ಪ್ರಾರ್ಥನೆ, 9ರಂದು ಧ್ವಜಾರೋಹಣ, ಕಲಶ ಸ್ಥಾಪನೆ, ಬೇರೀತಾಡನ, ಗಜಾರೋಹಣೋತ್ಸವ, 10 ರಂದು ಭೂತಾರೋಹಣೋತ್ಸವ ಸೇವೆಗಳು ಮುಗಿದಿವೆ.
ಮಂಗಳವಾರ ವೃಷಭರೋಹಣ, ಬುಧವಾರ ಗಿರಿಜಾ ಕಲ್ಯಾಣೋತ್ಸವ, ಗುರುವಾರ ಬ್ರಹ್ಮರಥೋತ್ಸವ, ಶುಕ್ರವಾರ ಬ್ರಾಹ್ಮಣ ಸಂಕಲ್ಪನೆ ಹಾಗೂ ಶನಿವಾರ ತೆಪ್ಪೋತ್ಸವ ನಡೆಯಲಿದೆ. ಹೀಗೆ ಒಂಬತ್ತು ದಿನಗಳ ಕಾಲ ಬೆಟ್ಟದಪುರ ಜಾತ್ರಾ ಮಹೋತ್ಸವ ನಡೆಯಲಿದೆ.
ಜಾತ್ರಾ ಹಾಗೂ ಉತ್ಸವ ಸಂದರ್ಭಗಳಲ್ಲಿ ಬೆಟ್ಟದಪುರ ಬೆಟ್ಟಕ್ಕೆ ಬರುವ ಭಕ್ತರು ತಿಂಡಿ ತಿನಿಸಿನ ಪ್ಲಾಸ್ಟಿಕ್ ಹಾಗೂ ನೀರಿನ ಬಾಟಲ್ ಗಳಂತಹ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವುದರಿಂದ ಹಸಿರು ವಾತಾವರಣಕ್ಕೆ ಸಮಸ್ಯೆ ಆಗುತ್ತಿತ್ತು. ಬೆಟ್ಟದಪುರ ಗ್ರಾಮ ಪಂಚಾಯಿತಿ ವತಿಯಿಂದ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದಂತೆ ಎಚ್ಚರಿಕೆ ನೀಡಲಾಗುತ್ತದೆ.
ಬೆಟ್ಟ ಹತ್ತಲಿರುವ ಭಕ್ತರು : ಸಾವಿರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ರಾಜ್ಯದ ಅನೇಕ ಜಿಲ್ಲೆಗಳಿಂದ ಬರುವ ಭಕ್ತರು ಹತ್ತಲಿದ್ದು, ಗ್ರಾಮ ಪಂಚಾಯತಿಯವರು ಭಕ್ತಾದಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ, ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಗೆ ಹುಣಸೂರು ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಪೂರ್ವಭಾವಿ ಸಭೆಯಲ್ಲಿ ಸೂಚಿಸಿದ್ದಾರೆ.
ಕಳೆಗಟ್ಟಿದ ಜಾನುವಾರ ಜಾತ್ರೆ : ಫೆಬ್ರವರಿ 3 ರಿಂದ ಆರಂಭವಾದ ಜಾನುವಾರು ಜಾತ್ರೆಗೆ ರಾಜ್ಯದ ಅನೇಕ ಜಿಲ್ಲೆಗಳಿಂದ ಸಾವಿರಾರು ಜೋಡಿಯ ಹಳ್ಳಿಕಾರ್ ತಳಿಯ ರಾಸುಗಳು ಆಗಮಿಸಿದ್ದು, ಕೋವಿಡ್ ಸಂದಂರ್ಭದಲ್ಲಿ ಕಳೆಗುಂದಿದ್ದ ಜಾನುವಾರು ಜಾತ್ರೆಗೆ ಈ ಬಾರಿ ಪುಷ್ಟಿ ಬಂದಿದೆ.

ಫೆಬ್ರವರಿ 12ರಂದು ರಾತ್ರಿ ಗಿರಿಜಾ ಕಲ್ಯಾಣೋತ್ಸವ ನಡೆಯಲಿದ್ದು ರಾಜ್ಯದ ಅನೇಕ ಭಾಗಗಳಿಂದ ಭಕ್ತಾದಿಗಳು ಆಗಮಿಸಲಿದ್ದಾರೆ. ಅಲ್ಲದೆ ಗುರುವಾರ ಬೆಳಿಗ್ಗೆ ನೂತನ ರಥ ಸೇರಿದಂತೆ ಮುರೂ ರಥಗಳ ಮೇಲೆ ಬೆಳ್ಳಿ ಬಸಪ್ಪ ಗಣಪತಿ ಹಾಗೂ ಗಿರಿಜಾಮ್ಮ ಮಲ್ಲಯ್ಯ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುವುದು. ರಥೋತ್ಸವದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.
ಸತೀಶ್ ಕಶ್ಯಪ, ದೇವಸ್ಥಾನದ ಅರ್ಚಕರು.