ಮೈಸೂರು : ಹುಡುಗಿ ಚುಡಾಯಿಸಿದ ಹಿನ್ನಲೆ ಹಾಗೂ ಹಳೇ ದ್ವೇಷ ಬೆಳೆಸಿಕೊಂಡ ರೌಡಿ ಶೀಟರ್ ತನ್ನ ಸಹೋದರ ಹಾಗೂ ಸಂಭಂದಿಕರ ಜೊತೆ ಸೇರಿ ಆಟೋ ಡ್ರೈವರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ನಡೆದಿದೆ.
ಗೂಡ್ಸ್ ಆಟೋ ಡ್ರೈವರ್ ಆಗಿರುವ ರವಿಚಂದ್ರ (೩೩) ಮೃತ ದುರ್ದೈವಿ. ರೌಡಿ ಶೀಟರ್ ಸುನಿಲ್ ರಾಜ್, ಈತನ ತಮ್ಮ ನಿಖಿಲ್ ರಾಜ್ ಹಾಗೂ ಇವರ ಚಿಕ್ಕಪ್ಪ ನಾರಾಯಣ ಕೊಲೆ ಆರೋಪಿಗಳು.
ಮೃತನ ತಮ್ಮ ಶಿವರಾಜ್ ಗಾರೆ ಕೆಲಸ ಮಾಡಿಕೊಂಡಿದ್ದು ಈತನ ಸಹಚರನೊಬ್ಬ ಸುನಿಲ್ರಾಜ್ಗೆ ಪರಿಚಯ ಇರುವ ಹುಡುಗಿಗೆ ಚುಡಾಯಿಸಿದ್ದಾನೆ. ಈ ವೇಳೆ ಗಲಾಟೆ ಆಗಿದ್ದು ಶಿವರಾಜ್ ಮಧ್ಯೆ ಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ. ಇದನ್ನೇ ದ್ವೇಷ ಬೆಳೆಸಿಕೊಂಡ ಸುನಿಲ್ ರಾಜ್ ಹಾಗೂ ನಿಖಿಲ್ ರಾಜ್ ಚಿಕ್ಕಪ್ಪ ನಾರಾಯಣ್ ಜೊತೆ ರವಿಚಂದ್ರ ಮನೆ ಬಳಿ ಬಂದು ಅವ್ಯಾಚ ಶಬ್ದಗಳಿಂದ ಆವಾಜ್ ಹಾಕಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ವೇಳೆ ಸುನಿಲ್ ರಾಜ್ ಡ್ರಾಗರ್ನಿಂದ ರವಿಚಂದ್ರ ಹೊಟ್ಟೆಗೆ ಚುಚ್ಚಿದ್ದಾನೆ. ಜಗಳ ಬಿಡಿಸಲು ಬಂದ ಶಿವರಾಜ್ ಹಾಗೂ ಮಾವ ಮಹೇಶ್ಗೂ ಗಾಯವಾಗಿದೆ. ಡ್ರಾಗರ್ ಇರಿತದಿಂದ ಗಾಯಗೊಂಡ ರವಿಚಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಈ ಸಂಭಂಧ ಸುನಿಲ್ ರಾಜ್, ನಿಖಿಲ್ ರಾಜ್ ಹಾಗೂ ನಾರಾಯಣ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.