ಮದ್ದೂರು: ಮಕ್ಕಳಿಗೆ ಒತ್ತಡದ ಶಿಕ್ಷಣವನ್ನು ನೀಡುವ ಬದಲು ಮಕ್ಕಳನ್ನು ಶಿಕ್ಷಣಕ್ಕೆ ಆಕರ್ಷಿಸುವಂತಹ ವಾತಾವರಣ ಸೃಷ್ಟಿ ಮಾಡಿ ಸೃಜನಾತ್ಮಕವಾದಂತ ಶಿಕ್ಷಣ ನೀಡಬೇಕೆಂದು ಕಸ್ತೂರಿಬಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಇಂಜಿನಿಯರ್ ಮಂಜುಳಾ ಹೇಳಿದರು.
ಪಟ್ಟಣದ ಎಂ. ಎಚ್. ಚನ್ನೇಗೌಡ ವಿದ್ಯಾ ಸಂಸ್ಥೆಯ ಡಾ. ಎಚ್. ಕೆ .ಮರಿಯಪ್ಪ ಕಾನ್ವೆಂಟ್ ನಲ್ಲಿ ಶನಿವಾರ ಯುಕೆಜಿ ಮಕ್ಕಳಿಗೆ ಆಯೋಜಿಸಿದ್ದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವ ವಿಷಯದಲ್ಲಿ ಅನಾವಶ್ಯಕವಾದ ಒತ್ತಡವನ್ನು ನೀಡುತ್ತಿರುವುದರಿಂದ ಮಕ್ಕಳು ಬೌದ್ಧಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಯಾವುದೇ ಕಾರಣಕ್ಕೂ ಮಕ್ಕಳಿಗೆ ಶಿಕ್ಷಣವನ್ನ ಕೊಡಿಸುವ ವಿಚಾರವನ್ನು ಪ್ರತಿಷ್ಠೆಯ ರೂಪದಲ್ಲಿ ತೆಗೆದುಕೊಳ್ಳಬಾರದೆಂದು ಕಿವಿಮಾತು ಹೇಳಿದರು.
ಮಕ್ಕಳಿಗೆ ಯಾವುದೇ ವಿಚಾರವನ್ನು ಗ್ರಹಿಸುವಂತಹ ಅಪಾರ ಶಕ್ತಿಯನ್ನು ಹೊಂದಿದ್ದು ಅವರ ಆಸಕ್ತಿಗೆ ಅನುಗುಣವಾದಂತ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಸಹಕರಿಸಿ ಮಾರ್ಗದರ್ಶನವನ್ನು ನೀಡಬೇಕೆ ಹೊರತು ಪೋಷಕರು ತಮ್ಮ ಆಸಕ್ತಿಗಳನ್ನ ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು ಎಂದ ಅವರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಮಾಡಬೇಕಾದರೆ ಮೊದಲು ತಾವುಗಳು ಮೊಬೈಲ್ ನಿಂದ ದೂರವಿದ್ದು ಅವರ ಜೊತೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸಬೇಕೆಂದು ಹೇಳಿದರು.
ಎಂ. ಹೆಚ್ .ಚೆನ್ನೇಗೌಡ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಮನೆಯ ಮೊದಲ ಪಾಠಶಾಲೆಯಾಗಿದ್ದು ಪೋಷಕರು ಮಕ್ಕಳನ್ನ ಬೆಳೆಸುವ ಪ್ರಾರಂಭಿಕ ಹಂತದಲ್ಲಿಯೇ ಉತ್ತಮ ನಡವಳಿಕೆಗಳನ್ನು ಕಲಿಸಿದರೆ ಅವರು ಭವಿಷ್ಯದಲ್ಲಿ ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಜೊತೆಯಲ್ಲಿ ಪಾಲಕರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಡಾ. ಎಚ್ .ಕೆ. ಮರಿಯಪ್ಪ ಕಾನ್ವೆಂಟ್ನ ಮುಖ್ಯ ಶಿಕ್ಷಕ ವರದರಾಜು, ಆಡಳಿತ ಅಧಿಕಾರಿ ರವಿ, ಕಸ್ತೂರಿ ಬಾ ಉನ್ನತ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಪ್ರಸಾದ್, ಶಿವಾನಂದ್, ಶೇಖರ್, ಶ್ರೀಕಂಠಯ್ಯ ,ಕೃಷ್ಣೆಗೌಡ, ಕಾಂತರಾಜು, ರಾಧಾ, ಕೃಷ್ಣವೇಣಿ ,ಲಕ್ಷ್ಮಿ ,ಗಾಯಿತ್ರಿ, ಕೃಷ್ಣ , ಚಂದ್ರಶೇಖರ್ ಇದ್ದರು.