ಮಂಡ್ಯ: ರಾಜ್ಯ ಸರ್ಕಾರದ ಗಮನ ಐದು ಗ್ಯಾರಂಟಿ, ಎಂಪಿ ಚುನಾವಣೆ ಅಷ್ಟೇ. ಕಾವೇರಿ ವಿಚಾರದ ಬಗ್ಗೆ ಸರ್ಕಾರಕ್ಕೆ ಗಮನ ಇಲ್ಲ. ಗಮನ ಇದ್ದಿದ್ರೆ ಪ್ರಾಧಿಕಾರದ ಮುಂದೆ ಸರಿಯಾಗಿ ವಸ್ತುಸ್ಥಿತಿ ಹೇಳ್ತಾ ಇದ್ರು. ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದ ಹಾಗೆ ಮಾಡಿದ್ದಾರೆ ಎಂದು ಶಾಸಕ ಜಿ ಟಿ ದೇವೇಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಆರ್ಎಸ್ ನಲ್ಲಿ ಮಾತನಾಡಿದ ಅವರು, ಎಲ್ಲರೂ ವಿರೋಧ ಮಾಡಿದ ಬಳಿಕ ಸರ್ವಪಕ್ಷ ಸಭೆ ಕರೆದರು. ಸಭೆಯಲ್ಲಿ ನೀರು ಬಿಡಲ್ಲ ಎಂದು ಬಿಡ್ತಾ ಇದ್ದಾರೆ. ಮೋದಿ ಅವರನ್ನು ವಿರೋಧ ಮಾಡಲು ಕರ್ನಾಟಕದ ಜನರನ್ನು ರಾಜ್ಯ ಸರ್ಕಾರ ಬಲಿ ಕೊಡ್ತಾ ಇದೆ. ಜನರ ಬಗ್ಗೆ ಇವರಿಗೆ ಸ್ವಲ್ಪವೂ ಕಾಳಜಿ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಬಳಿಕ ಕೇಂದ್ರಕ್ಕೆ ಹೋಗುವ ಯೋಚನೆ ಮಾಡ್ತಾ ಇದಾರೇನೋ ಎಂದು ಆರೋಪಿಸಿದರು.
ಟ್ರಾನ್ಸ್ ಫರ್, ಲಂಚ ದಂಧೆ ಬಿಟ್ಟು ಇವರಿಗೆ ಏನು ಗೊತ್ತಿಲ್ಲ. ಬಿಜೆಪಿನ 40% ಅಂತಾ ಹೇಳ್ತಾ ಇದ್ರು. ಇವರು 80% ಕಮಿಷನ್ ಪಡೆಯುತ್ತಾ ಇದ್ದಾರೆ. ರಾಜ್ಯದಲ್ಲಿ ಟ್ರಾನ್ಸಫರ್ ದಂಧೆ ನಡೆಯುತ್ತಲೆ ಇದೆ ಎಂದು ಕಿಡಿಕಾರಿದರು.
ಸಂಕಷ್ಟ ಸೂತ್ರವನ್ನು ಸಿದ್ದಪಡಿಸುವ ಬದಲು, ಗ್ಯಾರಂಟಿ ಅಂತಾ ಕುಳಿತಿದ್ದಾರೆ. ಡ್ಯಾಂ ವಸ್ತುಸ್ಥಿತಿ ಬಗ್ಗೆ ಗಮನಹರಿಸಬೇಕಾಗಿತ್ತು. ಇದನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಜೆಡಿಎಸ್ ನಾಯಕರು ಅಮಿತ್ ಶಾ, ನಡ್ಡಾ ಜೊತೆಗೆ ಕಾವೇರಿ ವಿಚಾರ ಮಾತಾಡಿದ್ದಾರೆ. ಇವರು ಈವರೆಗೆ ಏನು ಮಾತಾಡಿಲ್ಲ. ಬರಿ ಗ್ಯಾರಂಟಿ ಜಾತ್ರೆಯನ್ನು ಮಾಡ್ತಾ ಇದ್ದಾರೆ. ದೇವೇಗೌಡರು ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ. ಇವರು ಮಾತ್ರ ರಾಜಕೀಯ ಮಾಡ್ತಾ ಕೂತಿದ್ದಾರೆ ಎಂದು ಆರೋಪಿಸಿದರು.