Friday, April 11, 2025
Google search engine

Homeರಾಜ್ಯಸರ್ಕಾರಿ ಕಛೇರಿ ಸಮಯ ಪಾಲನೆ, ಸರ್ಕಾರಿ ನೌಕರರಿಗೆ ಹೊಸ ಸುತ್ತೋಲೆ

ಸರ್ಕಾರಿ ಕಛೇರಿ ಸಮಯ ಪಾಲನೆ, ಸರ್ಕಾರಿ ನೌಕರರಿಗೆ ಹೊಸ ಸುತ್ತೋಲೆ

ಬೆಂಗಳೂರು: ಸರ್ಕಾರಿ ಕಛೇರಿಗಳಿಗೆ ಅಧಿಕಾರಿಗಳು/ ನೌಕರರು ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ. ಕಛೇರಿ ವೇಳೆ ಮುಗಿಯುವ ಮೊದಲೇ ಅಲ್ಲಿಂದ ಹೊರಟಿರುತ್ತಾರೆ ಎಂಬ ಆರೋಪಗಳಿವೆ. ಈ ಕುರಿತು ಜನರು ಹಲವು ಬಾರಿ ದೂರುಗಳನ್ನು ಸಹ ನೀಡುತ್ತಾರೆ. ಆದ್ದರಿಂದ ಕಛೇರಿ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಪಾಲಿಸಬೇಕಾದ ನಿಯಮಗಳ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ಈ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಈ ಕುರಿತು ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಕಛೇರಿ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಪಾಲಿಸಬೇಕಾದ ಮುಖ್ಯ ಸೂಚನೆಗಳು ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ಪತ್ರ ದಿನಾಂಕ 1/10/2024ರ ಉಲ್ಲೇಖಿಸಲಾಗಿದೆ.

ಸುತ್ತೋಲೆಯ ವಿವರಗಳು: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಯ ಪಾಲನೆ ಮಾಡದಿರುವುದು, ಚಲನ-ವಲನ ವಹಿಯನ್ನು ನಿರ್ವಹಿಸದಿರುವುದು, ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿಯನ್ನು ಧರಿಸದಿರುವುದು, ಅಧಿಕಾರಿ/ ಸಿಬ್ಬಂದಿಗಳ ಹೆಸರು ಮತ್ತು ಹುದ್ದೆಯ ನಾಮ ಫಲಕಗಳನ್ನು ಅಳವಡಿಸದಿರುವ ಬಗ್ಗೆ ದೂರುಗಳು ಸ್ವೀಕೃತವಾಗಿರುವುದರಿಂದ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಸೂಚಿಸಿದೆ ಎಂದು ಹೇಳಿದೆ.

  • ನಿಯಮಗಳ ಪ್ರಕಾರ ಕಛೇರಿಗೆ ಬರುವ ವೇಳೆ ಹಾಗೂ ಕಛೇರಿಯಿಂದ ಹೊರಡುವ ವೇಳೆಯನ್ನು ಪಾಲನೆ ಮಾಡುವುದು.
  • ಕಛೇರಿ ಅವಧಿ ಪೂರ್ಣವಾಗುವವರೆಗೆ ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸತಕ್ಕದ್ದು.
  • ಕಛೇರಿ ಸಮಯದಲ್ಲಿ ನೌಕರರು/ ಅಧಿಕಾರಿಗಳು ಕಛೇರಿ ಕೆಲಸದ ನಿಮಿತ್ತ ತೆರಳಬೇಕಾಗಿದ್ದಲ್ಲಿ, ಚಲನ-ವಲನ ವಹಿಯಲ್ಲಿ ಸಕಾರಣವನ್ನು ನಮೂದಿಸಿ, ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.
  • ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು/ ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸುವುದು.
  • ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ/ ಅಧಿಕಾರಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ/ ಸಿಬ್ಬಂದಿಗಳು ಹೆಸರು ಮತ್ತು ಹುದ್ದೆ ಸೂಚಿಸುವ ನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು.
  • ಹಿರಿಯ ನಾಗರಿಕರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು.
  • ಯಾವುದೇ ರೀತಿಯ ಪತ್ರಗಳು ಬಂದಾಗ ಕಛೇರಿ ಕೈಪಿಡಿಯನ್ವಯ ಕಾರ್ಯ ನಿರ್ವಹಿಸುವುದು.
  • ಕಡತಗಳ ಚಲನವಲನಗಳ ಬಗ್ಗೆ ನಿಗಾವಹಿಸುವುದು.
  • ಇ-ಆಫೀಸ್ ಲಭ್ಯವಿರುವ ಕಡೆ ಕಡತ/ ಸ್ವೀಕೃತಿಪತ್ರ ಪರಿಶೀಲಿಸಿ ತುರ್ತಾಗಿ ನಿಯಮಗಳನ್ವಯ ವಿಲೇವಾರಿ ಮಾಡುವುದು.

ಅಲ್ಲದೇ ಸುತ್ತೋಲೆಯಲ್ಲಿ ಈ ಮೇಲಿನ ನಿಯಮಗಳನ್ನು ಪಾಲಿಸದಿದ್ದಲ್ಲಿ CCA ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಈಗಾಗಲೇ ಕರ್ನಾಟಕ ಸರ್ಕಾರ ತನ್ನ ನೌಕರರ ಗುರುತಿನ ಚೀಟಿ ಟ್ಯಾಗ್‌ ವಿನ್ಯಾಸವನ್ನು ಬದಲಿಸಿದೆ. ಹೊಸದಾಗಿ ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ನೂತನ ಟ್ಯಾಗ್ ಪರಿಚಯಿಸಿದ್ದು, ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು/ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸಬೇಕು ಎಂದು ವಿವಿಧ ಸುತ್ತೋಲೆಗಳ ಮೂಲಕ ಮಾಹಿತಿ ನೀಡಿದೆ. ಆದರೂ ಸಹ ನೌಕರರು/ ಸಿಬ್ಬಂದಿ ಅದನ್ನು ಧರಿಸುತ್ತಿಲ್ಲ ಎಂಬ ದೂರುಗಳ ಹಿನ್ನಲೆಯಲ್ಲಿ ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಅಲ್ಲದೇ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ/ ಅಧಿಕಾರಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ/ ಸಿಬ್ಬಂದಿಗಳು ಹೆಸರು ಮತ್ತು ಹುದ್ದೆ ಸೂಚಿಸುವ ನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು ಎಂದು ಈ ಹಿಂದೆ ಸುತ್ತೋಲೆಯಲ್ಲಿ ಸೂಚನೆಯನ್ನು ನೀಡಲಾಗಿತ್ತು.

RELATED ARTICLES
- Advertisment -
Google search engine

Most Popular