ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಮೂಲಕ ನಡೆಸಲು ಉದ್ದೇಶಿಸಿದ ‘ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್’ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲರು ಇನ್ನೂ ಪರಿಶೀಲನೆಗಾಗಿ ಬಾಕಿ ಉಳಿಸಿಕೊಂಡಿದ್ದಾರೆ.
ಕಳೆದ ಅಧಿವೇಶನದಲ್ಲಿ ಅಂಗೀಕರಿಸಲಾದ 11 ವಿಧೇಯಕಗಳ ಪೈಕಿ 10ಕ್ಕೆ ಅಂಕಿತ ಹಾಕಲಾಗಿದ್ದರೂ, ಈ ಪ್ರಮುಖ ವಿಧೇಯಕ ಮಾತ್ರ ಸ್ಥಗಿತದಲ್ಲಿದೆ. ‘ಇವ ನಮ್ಮವ ಇವ ನಮ್ಮವ’ ಸೇರಿದಂತೆ ಹಲವು ಮಸೂದೆಗಳಿಗೆ ಅನುಮೋದನೆ ದೊರೆತಿದ್ದು, ಬ್ಯಾಲೆಟ್ ವ್ಯವಸ್ಥೆಗೆ ಸಂಬಂಧಿಸಿದ ಮಸೂದೆಗೆ ಮಾತ್ರ ತಡೆ ಬಂದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ವಿಧೇಯಕ ಮಂಡನೆಯಾಗುವ ವೇಳೆ ವಿಧಾನಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಪ್ರಿಯಾಂಕ್ ಖರ್ಗೆ ಅವರನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹಿಂದುಳಿದ ವ್ಯವಸ್ಥೆಯತ್ತ ಕರೆದೊಯ್ಯುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದರೂ, ಸರ್ಕಾರ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿತು.
ಇದಕ್ಕೂ ಮೊದಲು ಸಚಿವ ಸಂಪುಟವು ಸುಮಾರು ಒಂದು ವರ್ಷದ ಹಿಂದೆ ಈ ತಿದ್ದುಪಡಿ ಬಗ್ಗೆ ತೀರ್ಮಾನ ತೆಗೆದುಕೊಂಡಿತ್ತು. ದೇಶದ ಮಟ್ಟದಲ್ಲಿ ಇವಿಎಂ ಕುರಿತು ರಾಜಕೀಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಲೆಟ್ ವಿಧಾನಕ್ಕೆ ಒತ್ತು ನೀಡಲಾಗಿದೆ.
ರಾಜ್ಯ ಸರ್ಕಾರದ ಈ ತೀರ್ಮಾನದ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವ ಲೆಕ್ಕಾಚಾರ ಇದೆ ಎಂಬ ವ್ಯಾಖ್ಯಾನವೂ ನಡೆದಿತ್ತು. ಆದರೆ, ಈಗ ವಿಧೇಯಕದ ವೇಗಕ್ಕೆ ರಾಜ್ಯಪಾಲರು ನಿಯಂತ್ರಣ ಹಾಕಿರುವುದರಿಂದ ಚರ್ಚೆಗೆ ಮತ್ತೊಂದು ಸ್ವರೂಪ ಸಿಕ್ಕಿದೆ.



