ಮಂಡ್ಯ: ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಅವುಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಡವಪುರದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ವಿತರಣೆ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಈ ವಷ ೫೪೦೦೦ ಕೋಟಿ ರೂ ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ .ಮುಂದಿನ ವಷದಿಂದ ೬೯೦೦೦ ಕೋಟಿ ರೂ ಇದಕ್ಕಾಗಿ ಸರ್ಕಾರ ಮೀಸಲಿರಿಸಲಾಗುತ್ತದೆ ಎಂದು ಅವರು ಹೇಳಿದರು. ವಿವಿಧ ಯೋಜನೆಗಳ ಮೂಲಕ ೧ ಲಕ್ಷ ಕೋಟಿ ರೂ ನೇರವಾಗಿ ಜನರಿಗೆ ತಲುಪುತ್ತಿದೆ. ಎಂದೆಂದಿಗೂ ನಮ್ಮ ಸರ್ಕಾರ ಬಡವರು, ಜನ ಸಾಮಾನ್ಯರ ಪರವಾಗಿ ಕೆಲಸ ಮಾಡಲಿದೆ ಎಂದು ಕೃಷಿ ಸಚಿವರು ಹೇಳಿದರು. ನಾಡಿನ ಎಲ್ಲಾ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ , ಹಾಗೂ ಮಾಸಿಕ ೨೦೦೦ ರೂ ನೀಡುವ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ.
ಅನ್ನಭಾಗ್ಯ, ಗೃಹ ಜ್ಯೋತಿ ,ಯುವ ನಿಧಿ ಯೋಜನೆಗಳೂ ಜನರ ಮನೆಗಳಿಗೆ ತಲುಪುತ್ತಿವೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ , ಶ್ರೀರಂಗಪಟ್ಟಣ, ಪಾಂಡವಪುರ ತಾಲ್ಲೂಕು ಗಳಲ್ಲಿ ಬರದ ಕಾರಣ ಈ ಬಾರಿ ೧೫,೦೦೦ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲು ಸಾಧ್ಯವಿಲ್ಲ. ರೈತರು ಫೆಬ್ರವರಿ ಅಂತ್ಯದೊಳ ಎಕರೆಗೆ ೫೬೬ ರೂ ನಂತೆ ಕಟ್ಟಿ ನೊಂದಣಿ ವಿಮೆ ಮಾಡಿದರೆ ೯೪೯೮ ರೂ ಸಿಗಲಿದೆ. ಒಟ್ಟು೩೫ ಕೋಟಿ ರೂ ಪರಿಹಾರ ಬರಲಿದೆ ಎಂದು ಸಚಿವರು ಕರೆ ನೀಡಿದರು .
ದರ್ಶನ್ ಪುಟಣ್ಣಯ್ಯ ಜನಸೇವೆಗೆ ಶ್ಲಾಘನೆ: ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರೂ ತಂದೆಯವರಂತೆ ರೈತ ಪರ ಕಾಳಜಿಯಿಂದ ಜನ ಸೇವೆಗೆ ಬಂದು ಕ್ಷೇತ್ರದಲ್ಲಿ ಅತ್ಯಂತ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿರುವ ಪಾಂಡವಪುರ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರ ಕೆಲಸ ಅಭಿನಂದನೀಯ ಕೃಷಿ ಸಚಿವರು ಶ್ಲಾಘಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ ಪುಟ್ಟಣಯ್ಯ ಅವರು ಮಾತನಾಡಿ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರನ್ನು ಆರ್ಥಿಕವಾಗಿ ಸದೃಢ ಮಾಡಲು ರೂಪಿಸಲಾಗಿದೆ. ೫ ಗ್ಯಾರಂಟಿ ಯೋಜನೆಗಳಿಗೆ ಸುಮಾರು ೫೭ ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಈ ೫ ಯೋಜನೆಗಳಿಗೆ ಯಾವುದೇ ಮಧ್ಯವರ್ತಿಗಳಲ್ಲಿ ಈ ಸಂಪೂರ್ಣಹಣ ನೇರವಾಗಿ ಅವರ ಖಾತೆಗೆ ಜಮೆಯಾಗುತ್ತಿದೆ ಎಂದರು.
ಭೂ ದಾಖಲೆಗಳ ಡಿಜಿಟಲೀಕರಣದಿಂದ ರೈತರು ದಾಖಲೆಗಳಿಗಾಗಿ ತಾಲ್ಲೂಕು ಕಚೇರಿ ಅಲಿಯುವುದು ತಪ್ಪಲಿದೆ. ರಾಜ್ಯದಲ್ಲೇ ಮೊದಲ ಹಂತದಲ್ಲಿ ಪಾಂಡವಪುರ ತಾಲ್ಲೂಕು ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶಬಾಬು ಬಂಡಿಸಿದ್ದೇಗೌಡ, ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು, ಉಪವಿಭಾಗಾಧಿಕಾರಿ ನಂದೀಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.