ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಸರ್ಕಾರದ ಮೇಲೆ ಗಂಭೀರ ಆರ್ಥಿಕ ಹೊರೆ ಉಂಟಾಗಿದೆ ಎಂಬ ವಿಚಾರವನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಖುಲಾಸೆ ಮಾಡಿದ್ದಾರೆ. ಇತ್ತೀಚೆಗೆ ಗೃಹ ಸಚಿವ ಜಿ. ಪರಮೇಶ್ವರ್ ನೀಡಿದ ವಿವಾದಾತ್ಮಕ ಹೇಳಿಕೆಗೆ ಸೀಮಿತವಾಗಿ, ಈ ಬಾರಿ ಸಚಿವರು ನೀಡಿದ ಈ ಸ್ಪಷ್ಟನೆ ಕೂಡ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು, “ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲ” ಎಂಬ ಹೇಳಿಕೆಯನ್ನು ನೀಡಿದ ನಂತರ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ನಂತರ ಅವರು ತಮ್ಮ ಹೇಳಿಕೆಯನ್ನು ತಮಾಷೆಯಾಗಿ ನೀಡಿದ್ದೆ ಎಂದು ನುಣುಚಿಕೊಂಡರೂ, ಈಗ ಸಹಕಾರ ಸಚಿವ ರಾಜಣ್ಣ ಅವರು ಅದರಲ್ಲೊಂದು ತಾತ್ವಿಕ ಸತ್ಯವಿದೆ ಎಂಬಂತೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎನ್. ರಾಜಣ್ಣ, “ರಾಜ್ಯ ಸರ್ಕಾರವು ಜನತೆಗೆ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳ ಅನ್ವಯ ಹಲವಾರು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ, ಸರ್ಕಾರದ ಮೇಲೆ ತೀರಾ ಭಾರಿಯಾದ ಹಣಕಾಸು ಹೊರೆ ಬಂದಿದೆ” ಎಂದು ಹೇಳಿದರು.
2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸಿದ್ದರಾಮಯ್ಯ ಅವರಿಗೆ ಒತ್ತಡಗಳು ಕಡಿಮೆ ಇತ್ತು. “ಅಂದು ಒಂದೇ ಪವರ್ ಸೆಂಟರ್ ಇತ್ತು. ಈಗ ಪವರ್ ಸೆಂಟರ್ಗಳು ಮೂರು-ನಾಲ್ಕು. ಲೆಕ್ಕ ಹಾಕಿ ನೋಡಿ. ಇದೀಗ ನಿರ್ಧಾರಮಾಡುವ ಪ್ರಕ್ರಿಯೆಯಲ್ಲೂ ಜಟಿಲತೆ ಬಂದಿದೆ. ಆದರೂ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಾದ್ಯಂತ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಹಣ ಇಲ್ಲದಿದ್ದರೆ ಕಾಮಗಾರಿಗಳಿಗೆ ಚಾಲನೆ ಕೊಡಲು ಸಾಧ್ಯವೇ?” ಎಂದು ಅವರು ಪ್ರತಿ ಪ್ರಶ್ನಿಸಿದರು.
ಬೇಡಿಕೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲವೆಂದು ಬೇಸರ ಇರಬಹುದು ಗ್ಯಾರಂಟಿ ಕೊಟ್ಟಿದ್ದರಿಂದ ಆರ್ಥಿಕ ಹೊರೆ ಸರ್ಕಾರದ ಮೇಲೆ ಇದೆ. ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲ. ಆಡಳಿತ ಪಕ್ಷ ಇರಬಹುದು ಅಥವಾ ವಿರೋಧ ಪಕ್ಷ ಅಂತ ಯಾವುದೇ ತಾರತಮ್ಯ ಇಲ್ಲ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸುತ್ತೇವೆ ಅನುದಾನ ಕೊಟ್ಟಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.