ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಹೊರವಲಯದ ವಾಮಂಜೂರಿನಲ್ಲಿ ನಡೆದ ಗನ್ ಮಿಸ್ ಫೈರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ಪೈರ್ ಮಾಡಿದ್ದ ಆರೋಪಿ ಪೊಲೀಸರಿಗೆ ಎರಡೆರಡು ಕಟ್ಟು ಕಥೆ ಹೇಳಿದ್ದ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಹೇಳಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಜನವರಿ 6 ರಂದು ಅದ್ದು ಅಲಿಯಾಸ್ ಬದ್ರುದ್ದೀನ್ (ಎಂಬಾತ ಪರವಾನಿಗೆ ಇಲ್ಲದ ಪಿಸ್ತೂಲ್ ಅನ್ನು ತನ್ನ ಅಂಗಡಿಯಲ್ಲಿ ಕುಳಿತುಕೊಂಡು ಪರೀಕ್ಷಿಸುತ್ತಿದ್ದ. ಈ ವೇಳೆ ಆತ ಟ್ರಿಗ್ಗರ್ ಒತ್ತಿದ್ದಾನೆ. ಪರಿಣಾಮ ಫೈರ್ ಆಗ ಅಂಗಡಿಯಲ್ಲಿ ಕುಳಿತಿದ್ದ ಮೊಹಮ್ಮದ್ ಸಫ್ವಾನ್ ಎಂಬಾತನಿಗೆ ಗುಂಡು ತಗುಲಿತ್ತು. ಸಫ್ವಾನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಸದ್ಯ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಆರೋಪಿಯು ಎರಡೆರಡು ಬಾರಿ ಪೊಲೀಸರ ತನಿಖೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾನೆ. ಮೊದಲು ಗಾಯಾಳು ಸಫ್ವಾನ್ ಕೈಯಲ್ಲಿರುವಾಗಲೇ ಪಿಸ್ತೂಲ್ನಿಂದ ಮಿಸ್ ಫೈರ್ ಆಗಿ ಗುಂಡು ಹೊಟ್ಟೆಗೆ ತಗುಲಿ ಗಾಯವಾಗಿದೆ ಎಂದು ಗಾಯಳು ಯುವಕನಿಂದಲೇ ಸುಳ್ಳು ಹೇಳಿಕೆ ಹೇಳಿಸಿದ್ದನು. ತನಿಖೆ ನಡೆಸಿದಾಗ ಇದು ಸುಳ್ಳು ಎಂದು ತಿಳಿದು ಬಂತು. ಅದಕ್ಕಾಗಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದೆವು.
ಆ ಬಳಿಕ ಮತ್ತೊಂದು ಕತೆ ಕಟ್ಟಲು ಶುರು ಮಾಡಿದ್ದಾನೆ. ಈ ಪಿಸ್ತೂಲ್ ಭಾಸ್ಕರ್ ಎಂಬ ವ್ಯಕ್ತಿಯದ್ದು, ಆತ ಅದನ್ನು ಬಿಟ್ಟು ಹೋಗಿದ್ದ. ಘಟನೆ ನಡೆದ ಬಳಿಕ ಆತ ಈ ರೀತಿಯ ಕಥೆ ಕಟ್ಟಿ ಹೇಳಲು ತಿಳಿಸಿದ್ದ ಎಂದು ತಿಳಿಸಿದ್ದನು ಎಂದು ಹೇಳಿದ್ದಾನೆ. ಆಗ ಅಲರ್ಟ್ ಆದ ಪೊಲೀಸರು ಬದ್ರುದ್ದೀನ್ನನ್ನು ವಶಕ್ಕೆ ತೆಗೆದುಕೊಂಡು ಸರಿಯಾಗಿ ತನಿಖೆ ನಡೆಸಿದಾಗ ಸತ್ಯ ಸಂಗತಿ ಹೊರಬಿದ್ದಿದೆ. ಪರವಾನಿಗೆ ಇಲ್ಲದ ಪಿಸ್ತೂಲ್ ಅನ್ನು ಇಮ್ರಾನ್ ಎಂಬಾತ ಅದ್ದು ಅಲಿಯಾಸ್ ಬದ್ರುದ್ದೀನ್ನಿಗೆ ನೀಡಿದ್ದ ಎಂದು ಹೇಳಿದರು.